ಬಾಗಲಕೋಟೆ: ಪ್ರತಿಭಟನಾನಿರತ ವಿದ್ಯಾರ್ಥಿನಿಯೊಬ್ಬಳಿಗೆ ‘ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ’ ಎಂದು ಜಿಲ್ಲಾಧಿಕಾರಿಯೊಬ್ಬರು ಮಾತಿನಲ್ಲೇ ಕುಟುಕಿದ ಪ್ರಸಂಗವೊಂದು ನಡೆದಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಮೈಸೂರಿನಲ್ಲಿನ ದೇಗುಲ ತೆರವು ಖಂಡಿಸಿ ಬಾಗಲಕೋಟೆಯಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಈ ಸನ್ನಿವೇಶ ಕಂಡುಬಂದಿದೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದವರು ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಹೋಗಿದ್ದಾರೆ. ಪ್ರತಿಭಟನಾಕಾರರು ಮನವಿ ಸಲ್ಲಿಸಿ ಮರಳುವ ಸಂದರ್ಭದಲ್ಲಿ ಅವರಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಕಂಡ ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ, ‘ಏನು ಓದುತ್ತಿದ್ದಿ’ ಎಂದು ಆಕೆಯನ್ನು ಪ್ರಶ್ನಿಸಿದ್ದಾರೆ.
ಆಗ ಭಾಗ್ಯಲಕ್ಷ್ಮಿ ಚನ್ನಯ್ಯಗೋಳ್ ಎಂಬ ಆ ವಿದ್ಯಾರ್ಥಿನಿ, ಪ್ಯಾರಾ ಮೆಡಿಕಲ್ ಓದುತ್ತಿರುವುದಾಗಿ ಹೇಳಿದ್ದಾಳೆ. ಇದಕ್ಕೆ ಪ್ರತಿಯಾಗಿ, ‘ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ’ ಜಿಲ್ಲಾಧಿಕಾರಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ಮರುಪ್ರತಿಕ್ರಿಯಿಸಿದ್ದಾಳೆ. ಅಲ್ಲದೆ ಪ್ರತಿಭಟನಾಕಾರರು ಘೋಷಣೆ ಕೂಗಿದ್ದರು.
ಇದರಿಂದ ಜಿಲ್ಲಾಧಿಕಾರಿಯವರು ಮುಜುಗರಕ್ಕೆ ಒಳಗಾದರ ಪ್ರಸಂಗವೂ ನಡೆಯಿತು. ಮಾತ್ರವಲ್ಲದೆ, ಜಿಲ್ಲಾಧಿಕಾರಿ ನಡೆಗೆ ವಿದ್ಯಾರ್ಥಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನಮ್ಮ ಧರ್ಮಕ್ಕೆ ತೊಂದರೆಯಾದಾಗ ನಾವು ಪ್ರತಿಭಟಿಸುತ್ತೇವೆ ಎಂದು ವಿದ್ಯಾರ್ಥಿನಿಯು ಡಿಸಿಗೆ ಉತ್ತರ ಕೊಟ್ಟಿದ್ದಾಳೆ.