ಚಿಕ್ಕೋಡಿ: ರಾಜ್ಯದಲ್ಲಿ ಮೌಢ್ಯ ನಿಷೇಧವಿದ್ದರೂ ಹಾಡಹಗಲೇ ಮಹಾರಾಷ್ಟ್ರದ ಮಾಂತ್ರಿಕ ವಾಮಾಚಾರ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ನಡೆದಿದೆ.
ಅಣ್ಣಪ್ಪಾ ಕಾಕನಕಿ ಎಂಬವರ ಮನೆ ಮುಂದೆ ಅಶೋಕ ಕಾಕನಕಿ ಮಹಾರಾಷ್ಟ್ರದಿಂದ ಮಾಂತ್ರಿಕನನ್ನು ಕರೆಸಿ ವಾಮಾಚಾರ ಮಾಡಿದ್ದಾರೆ ಎಂದು ಅಣ್ಣಪ್ಪಾ ಕಾಕನಕಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಾರಾಷ್ಟ್ರದ ತಾಂತ್ರಿಕ ಬಂದು ಮನಬಂದಂತೆ ಕುಣಿದು ವಾಮಾಚಾರ ಮಾಡಿರುವ ವೀಡಿಯೋ ವೈರಲ್ ಆಗಿದೆ. ಹಳದಿ ಭಂಡಾರ ಚೆಲ್ಲಿ, ನಿಂಬೆಹಣ್ಣು ಎಸೆದು ತಾಂತ್ರಿಕ ವಾಮಾಚಾರ ನಡೆಸಿದ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ. ವಾಮಾಚಾರವನ್ನು ಚಿತ್ರೀಕರಣ ಮಾಡಿದ್ದಕ್ಕೆ ಮೊಬೈಲ್ ಕಸಿದುಕೊಳ್ಳಲು ತಾಂತ್ರಿಕನ ತಂಡ ಮುಂದಾಗಿದೆ.
ಹಾಡಹಗಲೇ ಮನೆ ಮುಂದೆ ನಿಂಬೆಹಣ್ಣು ಎಸೆದು ವಾಮಾಚಾರ ನಡೆಸಿದ್ದು, ವಾಮಾಚಾರ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅಶೋಕ ಕಾಕನಕಿ ಕುಟುಂಬಸ್ಥರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಅಣ್ಣಪ್ಪಾ ಕಾಕನಕಿ ಕುಟುಂಬಸ್ಥರು ಪ್ರಕರಣ ದಾಖಲಿಸಲು ಹೋದರೆ, ಕಾಗವಾಡ ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.
ರಾಜ್ಯದಲ್ಲಿ ಮೌಢ್ಯ ನಿಷೇಧ ಕಾನೂನು ಜಾರಿ ಇದ್ದರೂ ಇಂಥ ಸಣ್ಣ ಘಟನೆಗಳಿಗೆ ಪ್ರಕರಣ ದಾಖಲಿಸಿಕೊಳ್ಳಲು ಆಗುವುದಿಲ್ಲ ಎಂದು ಕಾಗವಾಡ ಪಿಎಸ್ಐ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರು ನೀಡಲು ಹೋದವರು ಆರೋಪಿಸಿದ್ದಾರೆ.