ಬೆಂಗಳೂರು,ಸೆ.18- ಮುಂದಿನ ಮೂರು ತಿಂಗಳಲ್ಲಿ ಎಲ್ಲರ ಮನೆಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ತಲುಪಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಂದೂವರೆ ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಲಾಗಿದ್ದು, ಆರೋಗ್ಯ ಇಲಾಖೆ ಮೂರು ತಿಂಗಳಲ್ಲಿ ಪ್ರತಿ ಕುಟುಂಬಕ್ಕೂ ಆರೋಗ್ಯ ಕಾರ್ಡ್ ನೀಡುವ ಗುರಿ ಹಮ್ಮಿಕೊಂಡಿದ್ದು, ಇನ್ನು ಎರಡೂವರೆ ಕೋಟಿ ಕಾರ್ಡ್ಗಳನ್ನು ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಅಕ್ಟೋಬರ್ 2ಕ್ಕೆ 20 ವರ್ಷ ಆಡಳಿತ ನಡೆಸಿದ ಸಾಧನೆಯಾಗಲಿದೆ. ನಿನ್ನೆಯಿಂದ ಅಕ್ಟೋಬರ್ 2ರವರೆಗೆ ಹಲವು ಜನಪರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
# ಅಂಗಾಂಗ ದಾನ ಆಂದೋಲನ:
ಸದ್ಯದಲ್ಲೇ ದೊಡ್ಡ ಪ್ರಮಾಣದಲ್ಲಿ ಅಂಗಾಂಗ ದಾನದ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿ , ತಾವು, ಹಲವು ಸಚಿವರು ಹಾಗೂ ಅಧಿಕಾರಿಗಳು ಅಂಗಾಂಗ ದಾನ ಮಾಡುವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಮೃತ ವ್ಯಕ್ತಿಯೊಬ್ಬ 8 ಜನರಿಗೆ ಅಂಗಾಂಗ ದಾನ ಮಾಡಬಹುದು. ಇದರ ಬಗ್ಗೆ ಅರಿವು ಮೂಡಿಸಲಾಗುವುದು. ಶ್ವಾಸಕೋಶ, ಮೂತ್ರಪಿಂಡ, ನೇತ್ರ, ಮೊದಲಾದ ಅಂಗಗಳನ್ನು ದಾನ ಮಾಡಬಹುದಾಗಿದೆ. ವಿಭಾಗವಾರು ಆರ್ಗನ್ ರೆಡ್ರಿವಲ್ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು.
# ವಿಷನ್ ಡಾಕ್ಯೂಮೆಂಟ್:
ಕಳೆದ ಏಳೆಂಟು ತಿಂಗಳಿನಿಂದ 250 ತಜ್ಞರು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಷನ್ ಡಾಕ್ಯೂಮೆಂಟ್ ತಯಾರಿಸಿದ್ದು, ಅದನ್ನು ನಮಗೆ ನೀಡುತ್ತಾರೆ. ಮುಖ್ಯಮಂತ್ರಿ ಹಾಗೂ ನಾನು ಅದನ್ನು ಪ್ರಧಾನಿಯವರಿಗೆ ಸಲ್ಲಿಸುತ್ತೇವೆ. ಅದರಲ್ಲಿ ಯಾವ ರೀತಿ ಸಮಸ್ಯೆಗಳು ಉದ್ಭವಿಸುತ್ತವೆ. ಪರಿಹಾರ ಏನು ಎಂಬ ಮಾಹಿತಿ ಇದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿಷನ್ ಡಾಕ್ಯೂಮೆಂಟ್ ಮಾಡಲಾಗಿದೆ. ಇನ್ನು 15 ದಿನದೊಳಗೆ ಪ್ರಧಾನಿಯವರಿಗೆ ತಲುಪಿಸುತ್ತೇವೆ ಎಂದರು.
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಇನ್ನು ಮಾರ್ಗಸೂಚಿ ಪ್ರಕಟವಾಗಿಲ್ಲ. ಹಾಗೆಯೇ ಎರಡು ಡೋಸ್ ಲಸಿಕೆ ಪಡೆದವರಿಗೆ ಬೂಸ್ಟರ್ ಪಡೆಯುವ ಬಗ್ಗೆಯೂ ಮಾರ್ಗಸೂಚಿ ಪ್ರಕಟವಾಗಿಲ್ಲ. ಕೋವಿಡ್ ಸಂಬಂಧಿಸಿದ ವಿರೋಧ ಪಕ್ಷಗಳ ಟೀಕೆಗೆ ಸದನದಲ್ಲೇ ಉತ್ತರ ನೀಡುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.