ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬರ ಪುತ್ರ ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.
ಮಾಜಿ ಶಾಸಕ, ಸದ್ಯ ಹಟ್ಟಿ ಗಣಿ ಅಧ್ಯಕ್ಷರಾಗಿರುವ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ಅವರ ವಿರುದ್ಧ ಈ ಹಲ್ಲೆ ಆರೋಪ ಕೇಳಿ ಬಂದಿದೆ. ಇನ್ನು ಬೆಂಗಳೂರಿನ ವಸಂತನಗರ ಎಂಬೆಸಿ ಅಪಾರ್ಟ್ಮೆಂಟ್ ಬಳಿ ಈ ಜಗಳ ನಡೆದಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದೆ.
ಆಂಜನೇಯ ವಜ್ಜಲ್ ಎಂಬೆಸಿ ಹ್ಯಾಬಿಟ್ಯಾಟ್ನಲ್ಲಿ ವಾಸ ಮಾಡುತ್ತಿದ್ದು, ಕಳೆದ ಭಾನುವಾರ ಉದ್ಯಮಿ ದೀಪಕ್ ರೈ ಅವರ ಪುತ್ರ ವಿಕ್ರಮ್ ರೈ ಆ ಅಪಾರ್ಟ್ಮೆಂಟ್ ಬಳಿ ಕಾರು ಪಾರ್ಕಿಂಗ್ ಮಾಡಿದ ವಿಚಾರವಾಗಿ ಗಲಾಟೆ ನಡೆದಿದೆ.ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.