ಬೆಳಗಾವಿ: ಗಡಿ ಜಿಲ್ಲೆಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದು, ಈ ಸಂಬಂಧ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಿಎಂ ಗಣೇಶೋತ್ಸವದ ವಿಚಾರಗಳನ್ನು ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಲು ಸೂಚಿಸಿದ್ದೇನೆ ಎಂದಿದ್ದಾರೆ. ಬೆಳಗಾವಿಯಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಮಾಡುವುದು ಪ್ರತೀತಿಯಿದೆ. ಹೀಗಾಗಿ, ಈ ಬಾರಿ ಅದಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ.
ಸಿಎಂ ಮಧ್ಯಾಹ್ನದ ವೇಳೆಗೆ ಅಧಿಕೃತ ಆದೇಶವನ್ನು ಜಿಲ್ಲಾಡಳಿತದ ಕಡೆಯಿಂದ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ್ ಪಾಟೀಲ್ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿರನ್ನು ಅಭಯ್ ಪಾಟೀಲ್ ಭೇಟಿಯಾಗಿದ್ದರು. ಇಂದು ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್ಟಿನಗರದ ಸಿಎಂ ಖಾಸಗಿ ನಿವಾಸದಲ್ಲಿ ಭೇಟಿಯಾಗಿದ್ದರು. ಸೆಪ್ಟೆಂಬರ್ 13 ರಂದು ನೂತನವಾಗಿ ಆಯ್ಕೆಯಾಗಿರುವ ಬೆಳಗಾವಿ ಪಾಲಿಕೆ ಸದಸ್ಯರು ಸಿಎಂ ಭೇಟಿ ಮಾಡಲಿದ್ದಾರೆ.
ಸಿಎಂರನ್ನು ಭೇಟಿಯಾಗಲು ಬೆಳಗಾವಿಯಿಂದ ಬೆಂಗಳೂರಿಗೆ 35 ಮಂದಿ ಪಾಲಿಕೆ ಸದಸ್ಯರು ಆಗಮಿಸಲಿದ್ದಾರೆ. ಸಿಎಂರನ್ನು ಅಭಿನಂದಿಸಿ, ಬಳಿಕ ಪಕ್ಷದ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ಕೊಟ್ಟು, ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ಪಾಲಿಕೆ ಸದಸ್ಯರುಗಳು ನಿರ್ಧರಿಸಿದ್ದಾರೆ. ಶಾಸಕ ಹಾಗೂ ಮಹಾನಗರ ಪಾಲಿಕೆಯ ಬಿಜೆಪಿ ಉಸ್ತುವಾರಿ ಹೊತ್ತಿದ್ದ ಅಭಯ್ ಪಾಟೀಲ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಲಿದ್ದಾರೆ.