ದಾವಣಗೆರೆ: ಎಸಿಬಿ ದಾಳಿಗೆ ಮಾಹಿತಿ ನೀಡಿದ್ದಾರೆ ಎಂಬ ಆರೋಪ ಮಾಡಿ ಸರ್ಕಾರ ಅಧಿಕಾರಿ ಹಾಗೂ ಸಂಬಂಧಿಕರು ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ನಗರಸಭೆಯ ಯೋಜನಾ ನಿರ್ದೇಶಕ ಎಚ್.ಕೆ.ಕೃಷ್ಣಪ್ಪ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಅಂತ ಇದೇ ಗ್ರಾಮದ ಎಚ್.ಜೆ.ಗಣೇಶ ಅವರ ಕುಟುಂಬಸ್ಥರಯ ಆರೋಪ ಮಾಡಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಘಟನೆ..?
ಜುಲೈ 15 ರಂದು ಕೃಷ್ಣಪ್ಪ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಬೆಂಗಳೂರು, ಶಿವಮೊಗ್ಗ ಹಾಗೂ ಸ್ವ-ಗ್ರಾಮವಾದ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ಮನೆ, ತೋಟ, ಚಿನ್ನ ಸೇರಿದಂತೆ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಶಿವಮೊಗ್ಗದ ಶಿವಪ್ಪ ನಾಯಕ ಬಡಾವಣೆಯಲ್ಲಿ ಒಂದು ಬೃಹತ್ ಮನೆ, ಶಿವಮೊಗ್ಗ ವಿವಿಧ ಕಡೆ 3200 ಚದರ್ ಅಡಿ ಸೈಟ್, ಬೆಂಗಳೂರಿನ ನೆಲಗದ್ದೆಯಲ್ಲಿ 3399 ಅಳತೆ ಒಂದು ಸೈಟ್, ವಿಜಯನಗರ ಬಡಾವಣೆಯಲ್ಲಿ ಮೂರು ಅಂತಸ್ತಿನ ಮನೆ, ಸ್ವಗ್ರಾಮ ದೇವರಹಳ್ಳಿಯಲ್ಲಿ 15 ಎಕರೆ ಜಮೀನು, ಮನೆ, ಒಂದು ಕೆಜಿ ಚಿನ್ನ, 565 ಗ್ರಾಂ ಬೆಳ್ಳಿ, ಇನ್ನೊವಾ ಕಾರು ದಾಳಿ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿತ್ತು. ಈ ಎಲ್ಲಾ ಮಾಹಿತಿಯನ್ನು ಎಸಿಬಿ ಅಧಿಕಾರಿಗಳಿಗೆ ತಮ್ಮದೇ ಗ್ರಾಮದ ಗಣೇಶ ನೀಡಿದ್ದಾನೆ ಎಂದು ಆರೋಪಿಸಿ ಅಧಿಕಾರಿಯ ಕುಟುಂಸ್ಥರು ಕಿರುಕಳ ನೀಡಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.