ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ಜಾಂಡ ಹೂಡಿದ್ದ ಎಂಜನಿಯರ್ನನ್ನು 20 ವರ್ಷಗಳ ಬಳಿಕ ಕೊನೆಗೂ ಎತ್ತಂಗಡಿ ಮಾಡಲಾಗಿದೆ.
ಎಸ್.ಆರ್ .ಚೌಗಲಾ ಎಂಬ ದಿನಗೂಲಿ ಎಂಜನಿಯರ್, 1995ರಲ್ಲಿ ದಿನಗೂಲಿ ಆಧಾರದ ಮೇಲೆ ಜ್ಯೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಚೌಗಲಾ ತಮ್ಮ ಪ್ರಭಾವ ಬಳಸಿ ಇಪ್ಪತ್ತು ವರ್ಷಗಳಿಂದ ಬಹುತೇಕ ಕಾಲ ರಾಯಭಾಗ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಕುಡಚಿ ಪುರಸಭೆ, ರಾಯಭಾಗ ಪಟ್ಟಣ ಪಂಚಾಯಿತಿ, ಮುಗಳಖೋಡ, ಹಾರೋಗೇರಿ ಪುರಸಭೆ ಸೇರಿ 5 ಕಡೆ ಹೆಚ್ಚುವರಿ ಜವಾಬ್ದಾರಿಯನ್ನ ಇವರಿಗೆ ನೀಡಲಾಗಿತ್ತು.
ಇನ್ನೂ ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರಾಜೀವ್, ರಾಯಭಾಗ ವಿಧಾನಸಭಾ ಕ್ಷೇತ್ರದ ಶಾಸಕ ದುರ್ಯೋಧನ ಐಹೋಳೆ ಹಾಗೂ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಇವನ ಬೆನ್ನಿಗೆ ನಿಂತಿದ್ದರು ಎನ್ನಲಾಗಿದ್ದು, ಈ ಕುರಿತು ನ್ಯೂಸ್ಫಸ್ಟ್ ‘ದಿನಗೂಲಿ ಇಂಜಿನಿಯರ್ ನ ಅಕ್ರಮ ಪ್ರಭಾವ’ ಎಂದು ವರದಿ ಮಾಡಿತ್ತು.
ಇದರಿಂದ ಎಚ್ಚೆತ್ತುಕೊಂಡ ಬೆಳಗಾವಿ ಜಿಲ್ಲಾ ಯೋಜನಾ ನಿರ್ದೇಶಕರು, ಒಂದೇ ಜಾಗದಲ್ಲಿ ಬೀಡು ಬಿಟ್ಟ ಎಸ್.ಆರ್.ಚೌಗಲಾ ಅವರನ್ನ ಅಥಣಿ ತಾಲೂಕಿನ ಉಗಾರ ಖುರ್ದ ಪುರಸಭೆಗೆ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ ನೀಡಲಾಗಿದ್ದ 5 ಪುರಸಭೆಗಳ ಚಾರ್ಜ್ ಗಳನ್ನ ಕೂಡ ಹಿಂದಕ್ಕೆ ಪಡೆದಿದ್ದಾರೆ. ಈ ಮೂಲಕ 20 ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದ ಎಂಜನಿಯರ್ ಗೆ ಬಿಸಿ ಮುಟ್ಟಿಸಿದ್ದಾರೆ.