ರಾಯಚೂರು: ಎಪಿಎಂಸಿ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಆಯಂಬುಲೆನ್ಸ್ ಸಾಗಲು ಪರದಾಡಿದ ಘಟನೆ ಜಿಲ್ಲೆಯ ಜಿಲ್ಲೆಯ ಸಿಂಧನೂರಿನ ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ.
ಸಿಂಧನೂರು ಪಟ್ಟಣದ ಹೊರ ವಲಯದಲ್ಲಿ ಪ್ರತಿ ಸೋಮವಾರ ಕುರಿ ಸಂತೆ ನಡೆಯುತ್ತದೆ. ಕುರಿ ಸಂತೆ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ಕುರಿ ವ್ಯಾಪಾರಸ್ಥರು, ಗ್ರಾಹಕರು ಸ್ಥಳದಲ್ಲಿ ಜಮಾಯಿಸುತ್ತಾರೆ. ಪರಿಣಾಮ ಸಂತೆಯ ದಿನ ಇಡೀ ರಸ್ತೆ ಒಂದು ಕಿಲೋ ಮೀಟರ್ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಕಿರಿಕಿರಿ ಉಂಟು ಮಾಡುತ್ತಿದೆ.
ಸಂತೆಗೆ ಬಂದ ವಾಹನಗಳನ್ನೆಲ್ಲಾ ಯದ್ವಾತದ್ವಾ ರಸ್ತೆ ಮೇಲೆ ನಿಲ್ಲಿಸುವ ವ್ಯಾಪಾರಿಗಳು, ವಾಹನ ಸಂಚಾರಕ್ಕೆ ಅನಾನುಕೂಲ ಉಂಟು ಮಾಡುತ್ತಿದ್ದಾರೆ. ಈ ವೇಳೆ ರೋಗಿಯನ್ನ ಆಸ್ಪತ್ರೆಗೆ ಕರೆ ತರುತ್ತಿದ್ದ ಆಯಂಬುಲೆನ್ಸ್ ಗೂ ದಾರಿ ಸಿಗದೇ ಸುಮಾರು 15 ನಿಮಿಷಗಳ ಕಾಲ ಆಯಂಬುಲೆನ್ಸ್ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೀಗೆ ರಸ್ತೆಯ ಅಕ್ಕ ಪಕ್ಕ ಅಡ್ಡಾದಿಡ್ಡಿ ವಾಹನಗಳು ನಿಂತಿದ್ರೂ ಡೋಂಟ್ ಕೇರ್ ಎನ್ನದ, ಎಪಿಎಂಸಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.