ಬೆಂಗಳೂರು :ನಮ್ಮ ಮೆಟ್ರೋ ರಾಮನಗರದವರೆಗೂ ಹೋಗಬೇಕು ಅಂತ ಚಿಂತನೆ ಇದೆ. ರಾಮನಗರ, ರಾಜಾನುಕುಂಟೆ, ಮಾಗಡಿವರೆಗೂ ಮೆಟ್ರೋ ಮಾರ್ಗ ವಿಸ್ತರಿಸುವ ಗುರಿಯಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಮೆಟ್ರೋ ಅಗತ್ಯವಾಗಿದೆ.
ಹೀಗಾಗಿ ನಾಯಂಡಹಳ್ಳಿ-ಕೆಂಗೇರಿಯವರೆಗೆ ಮೆಟ್ರೋ ಅಗತ್ಯ ಇತ್ತು. ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಕೊಂಡಿ. ದೇಶ-ವಿದೇಶಗಳಿಂದ ಬರುವ ಗಣ್ಯರಿಗೆ ಉತ್ತಮ ಸಾರಿಗೆ ಬೇಕು. ಅದನ್ನು ನಮ್ಮ ಮೆಟ್ರೋ ಪೂರೈಸುತ್ತದೆ ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿಗೆ ನನ್ನ ಸಮಯ ಮೀಸಲಿಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಏರ್ಪೋರ್ಟ್ಗೆ ಸಂಪರ್ಕ ಕಲ್ಪಿಸಲು ಹೈ ಸ್ಪೀಡ್ ರೈಲು, ಸಬ್ ಅರ್ಬನ್ ಹಾಗೂ ಮೆಟ್ರೋ ರೈಲು ಮಾರ್ಗದ ವ್ಯವಸ್ಥೆ ಮಾಡುತ್ತಿದ್ದೇವೆ. ಬೇರೆ ಯಾವ ನಗರದಲ್ಲಿಯೂ ಇಂತಹ ವ್ಯವಸ್ಥೆ ಇಲ್ಲ. ನಗರದಲ್ಲಿ ಹೆಚ್ಚು ಟ್ರಾಫಿಕ್ ರಸ್ತೆಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಇರುವ ಕಡೆ ಆಟೋಮ್ಯಾಟಿಕ್ ಸಿಗ್ನಲ್ ವ್ಯವಸ್ಥೆ ಹಾಗೂ ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಟ್ರಾಫಿಕ್ ಫ್ರೀ ರೋಡ್ ಮಾಡಲು ಚಾಲನೆ ನೀಡಲಾಗಿದೆ ಎಂದು ಸಿಎಂ ಹೇಳಿದರು.