ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಗೆ ಆಗಮಿಸಿದ್ದರು, ಕಾರ್ಯಕ್ರಮದ ವೇಳೆ 13ಕ್ಕೂ ಅಧಿಕ ಜನರ ಜೇಬಿಗೆ ಖದೀಮರು ಕತ್ತರಿ ಹಾಕಿ, ಒಂದೂವರೆ ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೊನ್ನಪ್ಪ ಅವರ ಜೇಬಿನಲ್ಲಿದ್ದ 50 ಸಾವಿರ ರೂ.ಗಳಲ್ಲಿ 49 ಸಾವಿರ ರೂ. ದೋಚಿದ್ದಾರೆ.
ಹೊನ್ನಪ್ಪ ಮಾತ್ರವಲ್ಲದೆ 13 ಜನರ ಜೇಬಿಗೆ ಕತ್ತರಿ ಹಾಕಿ, ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಸಿಎಂ ಬೊಮ್ಮಾಯಿ ಆಗಮಿಸಿದ್ದ ವೇಳೆ ಕೃತ್ಯ ಎಸಗಿದ್ದಾರೆ. ಹಿರೇಕೆರೂರು ಪಟ್ಟಣದಲ್ಲೂ ಕೆಲವರ ಜೇಬಿಗೆ ಕತ್ತರಿ ಹಾಕಿದ್ದಾರೆ. ಕಳ್ಳರ ಕೈಚಳಕಕ್ಕೆ ಜನರು ಹಾಗೂ ಸಿಎಂ ಅಭಿಮಾನಿಗಳು ಕಂಗಾಲಾಗಿದ್ದಾರೆ.