ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ 4 ಅಂಶಗಳ ಪ್ರಣಾಳಿಕೆ ಘೋಷಣೆ ಮಾಡಿದೆ.
- ಉದ್ಯೋಗ ಸೃಷ್ಟಿ
- ಶೇ.50 ತೆರಿಗೆ ವಿನಾಯಿತಿ
- ಬೆಂಗಳೂರು ಮಟ್ಟದ ನಗರ ಸೌಲಭ್ಯ
- ನಗರದಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ
- ಮುಕ್ತ ಆಡಳಿತ ವ್ಯವಸ್ಥೆ
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಗೆ ಪಕ್ಷದ ಚಿನ್ಹೆಯ ಮೇಲೆ ಸ್ಪರ್ಧಿಸುವುದಾಗಿ ಮೊದಲು ಘೋಷಿಸಿದ್ದೇನೆ ನಾನು ಎಂದು ತಿಳಿಸಿದರು.
ನಾವು ನೂರಾರು ಆಶ್ವಾಸನೆ ನೀಡುವುದಿಲ್ಲ. ಆದರೆ ಜನರಿಗೆ ನೆಮ್ಮದಿಯ ಜೀವನ ನೀಡುತ್ತೇವೆ ಎಂದು ತಿಳಿಸಿದರು.
ಕೊರೊನಾ ಸಂಕಷ್ಟದಿಂದ ಜನರು ಆಕ್ಸಿಜನ್ ಗಾಗಿ ಪರದಾಡಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ, ಬೆಡ್ ಗಳಿಗಾಗಿ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುವಂತೆ ಮಾಡಿದ್ದಾರೆ. ಆಕ್ಸಿಜನ್ ಕೊಡಲು ಸಾಧ್ಯವಾಗದ ಬಿಜೆಪಿ ಸರ್ಕಾರ ಈಗ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರಣಾಳಿಕೆಯಲ್ಲಿ ಉಚಿತ ಶವಸಂಸ್ಕಾರ ಮಾಡುವುದಾಗಿ ಘೋಷಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ಕೊಟ್ಟು ಜೀವ ಉಳಿಸಲಾಗದವರು, ಈಗ ಚುನಾವಣೆಯಲ್ಲಿ ಉಚಿತ ಶವಸಂಸ್ಕಾರ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಅಂದರೆ ಇವರ ಉದ್ದೇಶವೇನು? ಎಂದು ಕಿಡಿಕಾರಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆಂದು ನಾವು ಸುದ್ದಿಗೋಷ್ಠಿ ನಡೆಸುತ್ತಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಎರಡು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲಿಯೂ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಆದರೆ ಘೋಷಿಸಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದರು.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿ. ಬೆಳಗಾವಿ ನಗರದ ಜನತೆಗಾಗಿ 50 ಪ್ರತಿಶತ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಬೆಳಗಾವಿ ಜನರ ಬಗ್ಗೆ ವಿಶ್ವಾಸವಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೂ ನಮಗೆ ಹೆಚ್ಚು ಮತ ನೀಡಿದ್ದಾರೆ. ನಮ್ಮ ಅಭ್ಯರ್ಥಿ ಸೋತಿರಬಹುದು. ಆದರೆ ಹೆಚ್ಚು ಮತಗಳನ್ನು ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಈ ಬಾರಿ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ಎರಡು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವಿದ್ದರೂ ಅಧಿವೇಶನವನ್ನು ನಡೆಸಿಲ್ಲ. ಇದು ಬೆಳಗಾವಿ ಜಿಲ್ಲೆ ಬಗ್ಗೆ ಬಿಜೆಪಿ ಸರ್ಕಾರಕ್ಕಿರುವ ಉದಾಸೀನತೆ, ನಿರ್ಲಕ್ಷ್ಯವನ್ನು ತೋರುತ್ತದೆ. ಕಾಂಗ್ರೆಸ್ ಗೆ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿ, ರೈತರಿಗೆ ಉತ್ತಮ ವ್ಯವಸ್ಥೆ, ಉದ್ಯೋಗ ಸೃಷ್ಟಿ, ಆರ್ಥಿಕ ಪುನಶ್ಚೇತನದ ಬಗ್ಗೆ ಗುರಿಯಿದೆ. ಅದನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಎಂ.ಬಿ.ಪಾಟೀಲ ಮೊದಲಾದವರು ಇದ್ದರು.