ಹಾವೇರಿ: ನರೇಗಾ ಕಾಮಾಗಾರಿ ವೇಳೆ ಜೆಸಿಬಿ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ರೈತನನ್ನು ಏಜೆಂಟರು ಥಳಿಸಿದ ಪರಿಣಾಮ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ಪುಟ್ಟಪ್ಪ ಈರಪ್ಪನವರ (60) ಆತ್ಮಹತ್ಯೆಗೆ ಶರಣಾದ ರೈತ. ನರೇಗಾ ಕಾಮಗಾರಿಯಲ್ಲಿ ಸರ್ಕಾರದ ನಿಯಮ ಮೀರಿ ಜೆಸಿಬಿ ಬಳಕೆಗೆ ಮೃತ ರೈತ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ನರೇಗಾ ಕಾಮಗಾರಿಯ ಏಜೆಂಟರಾದ ಮಂಜಪ್ಪ ಹಳೆಮನಿ ಮತ್ತು ದ್ಯಾವನಗೌಡ ದೊಡ್ಡಗೌಡ್ರ ಮೃತ ರೈತನನ್ನು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಮಾಡಿದ್ದು ಅಲ್ಲದೇ ನಮ್ಮ ಸುದ್ದಿಗೆ ಬರಬೇಡ ಎಂದು ಬೆದರಿಕೆ ಕೂಡ ಹಾಕಿದ್ದರಂತೆ. ಇದೇ ವಿಚಾರವಾಗಿ ಏಜೆಂಟರ್ಗಳು ಹಾಗೂ ರೈತನಿಂದ ಜಮೀನಿನಲ್ಲಿ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ.
ಆರೋಪಿಗಳು ಎಸ್ಕೇಪ್
ಈ ಹಿನ್ನೆಲೆ ಮನನೊಂದ ರೈತ ಹೊಡೆದವರ ಹೆಸರು ಹೇಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸಾಯುವ ಮುನ್ನ ಆರೋಪಿಗಳ ಹೆಸರು ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. ಇನ್ನು ರೈತ ಸಾವನ್ನಪ್ಪುತ್ತಿದ್ದಂತೆ ಆರೋಪಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ಅನ್ಯಾಯವಾಗಿ ಮುಗ್ಧ ರೈತನ ಪ್ರಾಣ ತೆಗೆದವರಿಗೆ ಶಿಕ್ಷೆಯಾಗಲಿ ಎಂದು ಸಂಬಂಧಿಕರ ಆಗ್ರಹಪಡಿಸಿದ್ದು, ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.