ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಷ್ಠೆ ಕಣವಾಗಿ ಸ್ವೀಕರಿಸದ್ದೇ ತಡ ಸ್ಥಳೀಯ ಕಾಂಗ್ರೆಸ್ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ. ಉಪಚುನಾವಣೆಯಲ್ಲಿ ಹಾನಗಲ್ ಟಿಕೆಟ್ಗಾಗಿ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ನಡುವೆ ಭಾರೀ ಪೈಪೋಟಿ ನಡೆದಿತ್ತು. ಇಬ್ಬರು ತಮ್ಮ ಬೆಂಬಲಿಗರನ್ನು ಕರೆದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಗಳಿಗೆ ಭೇಟಿ ನೀಡಿ ಟಿಕೆಟ್ ಬೇಡಿಕೆ ಇಟ್ಟಿದ್ದರು.
ಈಗ ಸಿಎಂ ಬಸವರಾಜ್ ಬೊಮ್ಮಾಯಿ ಹಾನಗಲ್ ಕ್ಷೇತ್ರದ ಉಪಚುನಾವಣೆಯನ್ನು ಸೀರಿಯಸ್ಸಗಾಗಿ ಪರಿಗಣಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸೈಲೆಂಟ್ ಆಗಿದ್ದಾರೆ. ಬಸವರಾಜ್ ಬೊಮ್ಮಾಯಿ ಸಿಎಂ ಆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಮತ್ತು ತವರು ಜಿಲ್ಲೆಯದ್ದು ಎಂಬ ಕಾರಣಕ್ಕೆ ಹೀಗಾಗಿದೆ. ಬೊಮ್ಮಾಯಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಹಲವು ಕಾರಣಗಳಿವೆ.
ಹೀಗಿವೆ ಹಲವು ಕಾರಣಗಳು..
- ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಪಕ್ಕದಲ್ಲೇ ಇದೆ ಹಾನಗಲ್! ಹೀಗಾಗಿ ಈ ಕ್ಷೇತ್ರವನ್ನೂ ಸಿಎಂ ಬೊಮ್ಮಾಯಿ ತಮ್ಮ ಸ್ವಂತ ಕ್ಷೇತ್ರದಂತೆ ಪರಿಗಣಿಸಿ ಉಪ ಚುನಾವಣೆ ಎದುರಿಸಲು ಮುಂದಾಗಿರೋದು ಕೈ ನಾಯಕರು ಹಿಂದೇಟು ಹಾಕುವಂತೆ ಮಾಡಿದೆ.
- ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ತವರು ಜಿಲ್ಲೆಯ ಕ್ಷೇತ್ರ. ಹಾವೇರಿ ಜಿಲ್ಲೆ ಮುಖ್ಯಮಂತ್ರಿಯವರು ಪ್ರತಿನಿಧಿಸುವ ಜಿಲ್ಲೆ. ತಮ್ಮ ತವರು ಜಿಲ್ಲೆಯ ಚುನಾವಣೆ ಸಿಎಂ ಪಾಲಿಗೆ ಪ್ರತಿಷ್ಠೆಯೇ ಹೌದು.
- ಹಾನಗಲ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಉದಾಸಿಯವರನ್ನು ಪರಮ ಗುರು ಎಂದೇ ಆರಾಧಿಸುವ ಬಸವರಾಜ್ ಬೊಮ್ಮಾಯಿ ಈ ಉಪಚುನಾವಣೆಯನ್ನು ಭಾವನಾತ್ಮಕವಾಗಿಯೂ ಗೆಲ್ಲಲೇಬೇಕಾದ ಯುದ್ಧವಾಗಿ ಪರಿಗಣಿಸಿದ್ದಾರೆ.
- ಬಸವರಾಜ್ ಬೊಮ್ಮಾಯಿಯವರ ರಾಜಕೀಯ ಏಳಿಗೆಯಲ್ಲಿ ಉದಾಸಿಯವರ ಪಾತ್ರವೂ ಇದೆ. ಹೀಗಾಗಿ ಈ ಉಪಚುನಾವಣೆ ಗೆಲ್ಲುವ ಮೂಲಕ ಗುರುಗಳ ಋಣ ತೀರಿಸುವ ಸಂಕಲ್ಪ ಮಾಡಿದ್ದಾರೆ ಸಿಎಂ ಬೊಮ್ಮಾಯಿ.
ಒಟ್ಟಿನಲ್ಲಿ ಮುಖ್ಯಮಂತ್ರಿಯಾದ ಮೇಲೆ ಬಸವರಾಜ್ ಬೊಮ್ಮಾಯಿ ಅವರಿಗೆ ಎದುರಾಗಲಿರುವ ಮೊದಲ ದೊಡ್ಡ ಸವಾಲ್ ಈ ಉಪ ಚುನಾವಣೆ. ಹೀಗಾಗಿ ತಮ್ಮನ್ನು ತಾವು ಪ್ರೂವ್ ಮಾಡಲೇಬೇಕಾದ ಅನಿವಾರ್ಯತೆ ಸಿಎಂಗಿದೆ. ಹೀಗಾಗಿ ಅವರು ಶತಾಯ ಗತಾಯ ಗೆಲುವಿಗಾಗಿ ತಮಗಿರುವ ಎಲ್ಲ ಅಧಿಕಾರ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಅಂದಾಜಿಸಿಯೇ ಕೈ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.