ದಾವಣಗೆರೆ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆಯೊಬ್ಬರು ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಸಶಸ್ತ್ರ ಮೀಸಲು ಪಡೆಯ ಚೇತನ್ (28 ವ) ಸಾವನ್ನಪ್ಪಿದ ಪೊಲೀಸ್ ಕಾನ್ಸ್ ಸ್ಟೇಬಲ್.
ದಾವಣಗೆರೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡಿವ ವೇಳೆ ಈ ಅವಘಡ ನಡೆದಿದೆ.
ತೀವ್ರವಾಗಿ ಗಾಯಗೊಂಡ ಚೇತನ್ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆ ಗೆ ಸಾಗಿಸಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಚೇತನ ಸಾವನ್ನಪ್ಪಿದ್ದರು.
ಮೃತ ಪೇದೆ ಚೇತನ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದವರಾಗಿದ್ದು, 2012 ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದ್ದರು.
ಸುದ್ದಿ ತಿಳಿಯುತ್ತಲೇ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಎಸ್. ರವಿ ಆಸ್ಪತ್ರೆ ಗೆ ಭೇಟಿ ನೀಡಿದರು. ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲಿ ಚೇತನ್ ಸಾವನ್ನಪ್ಪಿದ್ದಾನೆ. ಆತನಿಗೆ ಗಂಡು ಮಗ ಇದ್ದಾನೆ. ಇಲಾಖೆಯಿಂದ ಮೃತನ ಕುಟುಂಬಕ್ಕೆ ಅಗತ್ಯ ಸಹಾಯ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು.