ಹಾಸನ: ಉಸಿರಾಟ ತೊಂದರೆ ಮತ್ತು ವಾಹನ ಪಲ್ಟಿಯಾದ ಪರಿಣಾಮ 50ಕ್ಕೂ ಹೆಚ್ಚು ಕರುಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕರುಗಳ ಬಾಯಿ, ಕಾಲಿಗೆ ಹಗ್ಗ ಕಟ್ಟಿದ್ದರಿಂದ ಉಸಿರಾಟ ತೊಂದರೆಯಾಗಿ ಹಲವು ಮೂಕ ಪ್ರಾಣಿಗಳು ಸಾವನ್ನಪಿದ್ದರೆ, ಅದೇ ವಾಹನ ಮುಂದೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಅಪಘಾತದಲ್ಲಿ ಕೂಡ ಹಲವು ಕರುಗಳು ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ದ್ಯಾವಪ್ಫಹಳ್ಳಿ ಬಳಿ ನಡೆದಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಇರುವುದರಿಂದ ಅಕ್ರಮವಾಗಿ 100 ಕರುಗಳನ್ನು ಚಿಕ್ಕ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಕರುಗಳಿಗೆ ಅಮಾನವೀಯವಾಗಿ ಕಾಲು, ಕೈಗಳಿಗೆ ಹಗ್ಗ ಬಿಗಿದಿದ್ದರಿಂದ ಉಸಿರಾಟ ತೊಂದರೆಯಿಂದಾಗಿ ಹಲವು ಕರುಗಳು ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಅದೇ ವಾಹನ ಮುಂದೆ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಸಹ ಕರುಗಳು ಮೃತಪಟ್ಟಿವೆ. ಇನ್ನು ವಿಷಯ ತಿಳಿದು ಶಾಸಕ ಕೆ.ಎಸ್.ಲಿಂಗೇಶ್ ಸ್ಥಳಕ್ಕೆ ದೌಡಾಯಿಸಿ ಉಳಿದ ಕರುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿರುವದಾಗಿ ನ್ಯೂಸ್ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಘಟನೆ ಕುರಿತಂತೆ ಶಾಸಕ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.