ವಿಜಯಪುರ: ತಾಯಿಯ ಹಲ್ಲಿನ ಸೆಟ್ ನಾಶ ಮಾಡಿದಳೆಂಬ ಕಾರಣಕ್ಕೆ ವಿಕೃತ ಯುವಕನೊಬ್ಬ ಆರು ವರ್ಷದ ಬಾಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ.9 ರಂದು ಮಿರಗಿ ಗ್ರಾಮದಲ್ಲಿ ಬೋಳೆಗಾಂವ ಮೂಲದ ಆರು ವರ್ಷದ ಬಾಲಕಿ ಗ್ರಾಮದ ಹನಮಂತ ದೇವರ ದೇವಸ್ಥಾನದ ಬಳಿ ಆಟ ಆಡುತ್ತಿದ್ದಾಗ ಕಾಣೆಯಾಗಿದ್ದಳು. ಜೊತೆಗಿದ್ದ ಆಕೆಯ ಸಹೋದರಿ ಮನೆಗೆ ಬಂದರೂ ಈ ಬಾಲೆ ಮನೆಗೆ ಮರಳದ ಕಾರಣ ಗ್ರಾಮದಲ್ಲಿ ಹುಡುಕಿದ ಪಾಲಕರು ಹೋರ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಇಂಡಿ ಡಿಎಸ್ ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ತನಿಖೆ ಇಳಿದ ಇಂಡಿ ಸಿಪಿಐ ರಾಜಶೇಖರ, ಹೊರ್ತಿ ಎಸ್.ಐ ಎನ್.ಬಿ.ಶಿವುರ ಹಾಗೂ ಪೊಲೀಸ್ ಸಿಬ್ಬಂದಿಗೆ ಆಘಾತ ಕಾದಿತ್ತು. ಸಾಕ್ಷಿ, ಪುರಾವೆ ಸಿಗದಂತೆ ಆರೋಪಿ ನಾಶ ಮಾಡಿದ್ದರಿಂದ ಪ್ರಕರಣ ಅತೀ ಸೂಕ್ಷ್ಮತೆಯಿಂದ ಕೂಡಿತ್ತು.
ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸ ತನಿಖಾ ಕೊನೆಗೂ ಆ.15 ರಂದು ಬೋಳೆಗಾಂವ ಗ್ರಾಮದಲ್ಲಿ ಸಂಗನಗೌಡ ಬಾಬುಗೌಡ ಬಿರಾದಾರ (24 ವ) ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಓಣಿ ನಿವಾಸಿ ಬಾಲಕಿ ಆಟವಾಡುವಾಗ ಸಂಗನಗೌಡನ ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ್ದಳು. ಇದರಿಂದ ತನ್ನ ಅಜ್ಜಿ ಊಟ ಮಾಡಲು ಸಂಕಟ ಪಡಲು ಈ ಬಾಲಕಿಯೇ ಕಾರಣ ಎಂದು ಸಿಟ್ಟಿನಿಂದ ಆಕೆಯನ್ನು ಅಪಹರಿಸಿ, ಹತ್ಯೆ ಮಾಡಿ, ಸಾಕ್ಷಿ-ಪುರಾವೆ ನಾಶ ಮಾಡಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ ಪಿ ಆನಂದ್ ಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ಸದರಿ ಕ್ಲಿಷ್ಟಕರ ಪ್ರಕರಣ ಬೇಧಿಸುವಲ್ಲಿ ಯಶಸ್ವಿ ಆಗಿರುವ ತನಿಖಾ ತಂಡವನ್ನು ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.