ಬೆಂಗಳೂರು: ರಾಷ್ಟ್ರಾದ್ಯಂತ ಕೇಂದ್ರದ ನೂತನ ಸಚಿವರಿಂದ ಜನಾಶೀರ್ವಾದ ಯಾತ್ರೆಗೆ ಸೋಮವಾರ ಚಾಲನೆ ದೊರೆಯಲಿದ್ದು, ರಾಜ್ಯದ ನಾಲ್ವರು ಕೇಂದ್ರ ಸಚಿವರು ತಮ್ಮ ವಿಭಾಗ ವ್ಯಾಪ್ತಿಯಲ್ಲಿ ಯಾತ್ರೆ ನಡೆಸಲಿದ್ದಾರೆ.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ನಾರಾಯಣಸ್ವಾಮಿ, ಬೆಂಗಳೂರು ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕರಾವಳಿ ಭಾಗದಲ್ಲಿ (ದಕ್ಷಿಣ ಕನ್ನಡ) ಕೃಷಿ ಮತ್ತು ರೈತರ ಕಲ್ಯಾಣ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ಕಲಬುರಗಿ ವಿಭಾಗದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಭಗವಂತ ಖೂಬಾ ಯಾತ್ರೆ ಕೈಗೊಳ್ಳಲಿದ್ದಾರೆ.
ಬಹುತೇಕರು ತಮ್ಮ ಕ್ಷೇತ್ರಗಳಿಂದಲೇ ಸೋಮವಾರ ಯಾತ್ರೆ ಆರಂಭಿಸಲಿದ್ದು, ವಿವಿಧ ಊರುಗಳನ್ನು ಸಂಚರಿಸಲಿದ್ದಾರೆ. ದೇವಸ್ಥಾನ ಭೇಟಿ, ಸ್ಥಳೀಯಮಟ್ಟದ ಸಭೆಗಳು ಯಾತ್ರೆಯ ಭಾಗವಾಗಿವೆ. ಸ್ಥಳೀಯ ಶಾಸಕರು, ರಾಜ್ಯ ಸರ್ಕಾರದ ಸಚಿವರು ಕೂಡ ಯಾತ್ರೆಯಲ್ಲಿ ಕೇಂದ್ರ ಸಚಿವರಿಗೆ ಸಾಥ್ ನೀಡಲಿದ್ದಾರೆ.
ರಾಜ್ಯದಲ್ಲಿ 5 ದಿನಗಳ ಯಾತ್ರೆಯಲ್ಲಿ ನಾಲ್ಕು ಸಚಿವರ ತಂಡಗಳು 2,030 ಕಿ.ಮೀ. ದೂರ ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಯೋಜನೆಗಳು, ರೈತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಈ ವೇಳೆ ಪರಿಚಯಿಸಲಾಗುತ್ತದೆ.