ಹಾವೇರಿ: ಒಂದೆಡೆ ಮೂರನೇ ಕೊರೊನಾ ಅಲೆಯ ಭೀತಿ ಶುರುವಾಗಿದೆ.. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ರಾಜ್ಯದಲ್ಲಿ ಮತ್ತೆ ದೊಡ್ಡಮಟ್ಟದ ಅನಾಹುತ ಸೃಷ್ಟಿಯಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಗಳನ್ನ ನಡೆಸದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಡಿಜಿಐಜಿಪಿ ಆದೇಶ ಹೊರಡಿಸಿದ್ದರು. ದುರಂತ ಅಂದ್ರೆ ಸಿಎಂ ತವರು ಕ್ಷೇತ್ರದಲ್ಲೇ ಸಿಎಂ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.. ಪೊಲೀಸ್ ಇಲಾಖೆಯೇ ಡಿಜಿಐಜಿಪಿ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ.
ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದ್ದರು.. ಇನ್ನು ಕಳೆದ ವಾರವೇ ಡಿಜಿಐಜಿಪಿ ಸಹ ಆದೇಶ ಹೊರಡಿಸಿದ್ದರು. ಸದ್ಯ ಎರಡೂ ಆದೇಶಗಳನ್ನ ಧಿಕ್ಕರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾರ್ಯಕ್ರಮದ ಫೋಟೋಗಳು ವೈರಲ್ ಆಗುತ್ತಿದ್ದು ಪೊಲೀಸರೇ ಹೀಗೆ ಮಾಡೋದು ಸರೀನಾ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸಿಎಂ ಬೊಮ್ಮಾಯಿಯವರ ಕ್ಷೇತ್ರವಾದ ಹಾವೇರಿಯ ಶಿಗ್ಗಾವಿ ಕ್ಷೇತ್ರದ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನು ಬೇರೆ ಠಾಣೆಗಳಲ್ಲಿ ಎಲ್ಲರೂ ಒಂದು ವರ್ಷದಲ್ಲಿ ವರ್ಗಾವಣೆಯಾದ್ರೆ ಈ ಠಾಣೆಯಲ್ಲಿ ಮಾತ್ರ ಕಳೆದ ವರ್ಷದಿಂದ ಎಸ್ಐ ಸಂತೋಷ್ ಎಂಬುವವರ ವರ್ಗಾವಣೆಯಾಗಿಲ್ಲ ಅಂತಲೂ ಜನರು ಆಕ್ರೋಶ ಹೊರಹಾಕಿದ್ದಾರೆ.