ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಭಲೇ ಜೋಡಿ ಅಂತಾ ಬಿಜೆಪಿ ವ್ಯಂಗ್ಯವಾಡಿದೆ. ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆಸಿದ ಬಳಿಕ ಅವರನ್ನು ಭೇಟಿಯಾಗಿದ್ದ ಡಿಕೆಶಿ ಧೈರ್ಯ ತುಂಬಿದ್ದರು. ಶಾಸಕ ಜಮೀರ್ ಅಹ್ಮದ್ ಆಸ್ತಿ ಮೇಲೆ ಇಡಿ ದಾಳಿ ಯಾಕೆ ನಡೆದಿದೆ ಎಂದು ಚರ್ಚಿಸಿದ್ದೇನೆ. ಅವರಿಗೆ ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಅಂತಾ ಡಿಕೆಶಿ ಹೇಳಿದ್ದರು.
ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಡಿಕೆಶಿ ಮತ್ತು ಜಮೀರ್ ಅಹ್ಮದ್(Zameer Ahmed Khan)ಇಬ್ಬರು ಒಟ್ಟಿಗೆ ಇರುವ ಫೋಟೋ ಶೇರ್ ಮಾಡಿ ಟೀಕಿಸಿದೆ. ‘ಒಬ್ಬರು ಐಟಿ, ಇಡಿ ಪ್ರಕರಣದಲ್ಲಿ ತಿಹಾರ್ ಜೈಲು ಯಾತ್ರೆ ಮುಗಿಸಿ ಬಂದವರು , ಇನ್ನೊಬ್ಬರು ದಶಕಗಳ ವಂಚನೆ ಬಳಿಕ ಈಗ ಇಡಿ ಬಲೆಗೆ ಬಿದ್ದವರು ‘ ಅಂತಾ ಬಿಜೆಪಿ ವ್ಯಂಗ್ಯವಾಡಿದೆ. ‘ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಜಮೀರ್ ಅಹ್ಮದ್ ಅವರಿಗೆ ಕೆಪಿಸಿಸಿ ಭ್ರಷ್ಟಾಧ್ಯಕ್ಷ ಮಾರ್ಗದರ್ಶನ ಮಾಡಿರುವುದನ್ನು ನೋಡಿದರೆ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಇಡಿ ಮಾರ್ಗದರ್ಶನ ಮಂಡಳಿ ಘಟಕ ತೆರೆಯಬಹುದು’ ಅಂತಾ ಬಿಜೆಪಿ ಕುಟುಕಿದೆ.
ಭಲೇ ಜೋಡಿ !!!
ಒಬ್ಬರು ಐಟಿ, ಇಡಿ ಪ್ರಕರಣದಲ್ಲಿ ತಿಹಾರ್ ಜೈಲು ಯಾತ್ರೆ ಮುಗಿಸಿ ಬಂದವರು,
ಇನ್ನೊಬ್ಬರು ದಶಕಗಳ ವಂಚನೆ ಬಳಿಕ ಈಗ ಇಡಿ ಬಲೆಗೆ ಬಿದ್ದವರು.#IMAZameer ಅವರಿಗೆ ಕೆಪಿಸಿಸಿ ಭ್ರಷ್ಟಾಧ್ಯಕ್ಷ ಮಾರ್ಗದರ್ಶನ ಮಾಡಿರುವುದನ್ನು ನೋಡಿದರೆ @INCKarnataka ಪಕ್ಷಕ್ಕೆ #ಇಡಿಮಾರ್ಗದರ್ಶಿಮಂಡಳಿ ಘಟಕ ತೆರೆಯಬಹುದು. pic.twitter.com/2tFCC6m3oZ
ಬಹುಕೋಟಿ ಐಎಂಎ ವಂಚನೆ ಹಗರಣ(IMA Fraud Case), ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಸೇರಿ ಅನೇಕ ವಿಚಾರಗಳಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ(ED)ದ ಅಧಿಕಾರಿಗಳು ಆಗಸ್ಟ್ 5ರ ಗುರುವಾರ ಶಾಸಕ ಜಮೀರ್ ಅಹಮ್ಮದ್ ಮತ್ತು ಮಾಜಿ ಸಚಿವ ರೋಷನ್ ಬೇಗ್ ಮನೆಗಳ ಮೇಲೆ ದಾಳಿ ನಡೆಸಿದ್ದರು. ದಿಢೀರ್ ದಾಳಿ ನಡೆಸಿದ 100ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡ ಜಮೀರ್ ಮತ್ತು ಬೇಗ್ ಮನೆ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ಕೇವಲ ಆಸ್ತಿ ವಿಚಾರವಾಗಿ ಇಡಿ ಅಧಿಕಾರಿಗಳು ನನ್ನ ವಿಚಾರಣೆ ನಡೆಸಿದ್ದಾರೆ ಅಂತಾ ಜಮೀರ್ ಅಹ್ಮದ್ ಹೇಳಿಕೊಂಡಿದ್ದರು.
ಈ ದಾಳಿಯ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಯಾರೋ ಬೇಕಂತಲೇ ನನ್ನ ವಿರುದ್ಧ ದೂರು ನೀಡಿ ಇಡಿ ದಾಳಿ(ED Raid) ನಡೆಯುವಂತೆ ಮಾಡಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಅಂತಾ ಜಮೀರ್ ಹೇಳಿದ್ದರು. ಈ ಹಿಂದೆ ಮಾಜಿ ಸಚಿವರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಅಕ್ರಮ ಆಸ್ತಿ ಸಂಪಾದನೆ, ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಐಟಿ ಅಧಿಕಾರಿಗಳು ಡಿಕೆಶಿ ವಿಚಾರಣೆ ನಡೆಸಿದ್ದರು.