ಹುಬ್ಬಳ್ಳಿ: ಹಾಡು ಹಗಲೇ ಭಾರಿ ಪ್ರಮಾಣ ಕಳ್ಳತನ ಮಾಡಿರುವ ಘಟನೆ ಇಲ್ಲಿನ ಗೋಕುಲ ರಸ್ತೆಯ ನೆಹರೂನಗರದಲ್ಲಿರುವ ಹುಬ್ಬಳ್ಳಿ ವಿದ್ಯುತ್ ಸರಭರಾಜು ನಿಗಮದ ಕಿರಿಯ ಸಹಾಯಕಿಯೊಬ್ಬರ ಮನೆಯಲ್ಲಿ ನಡೆದಿದೆ. ಸುಮಾರು 13.40ಲಕ್ಷಕ್ಕೂ ಹೆಚ್ಚು ಮೌಲ್ಯದ ನಗನಾಣ್ಯ ದೋಚಲಾಗಿದೆ.
ಹುಬ್ಬಳ್ಳಿ ಹೆಸ್ಕಾಂನಲ್ಲಿ ಕಿರಿಯ ಸಹಾಯಕಿ ಆಗಿರುವ ಮಧು ಶಶಿಧರ ನಾಶಿಪುಡಿ ಎಂಬುವರ ಮನೆಯಲ್ಲಿಯೇ ಈ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತ ಕಳ್ಳರು ದಿ. 9ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ3.30ರ ಮಧ್ಯೆ ಹಿತ್ತಲ ಬಾಗಿಲಿನ ಕದ ದೂಡಿ ಒಳಗಿನ ಚಿಲಕದ ಕೊಂಡಿ ಕಿತ್ತು ಮನೆಯೊಳಗೆ ಪ್ರವೇಶಿ ಮಾಡಿ ಬೆಡ್ ರೂಮ್ನಲ್ಲಿದ್ದ ವ್ಯಾನಿಟಿ ಬ್ಯಾಗ್ದಲ್ಲಿಟ್ಟಿದ್ದ ಅಲ್ಮೇರಾ ಚಾವಿ ತೆಗೆದುಕೊಂಡು ಇನ್ನೊಂದು ಬೆಡ್ ರೂಮ್ಗೆ ಹೋಗಿ ಅಲ್ಲಿದ್ದ ಅಲ್ಮೇರಾದ ಲಾಕರ್ನಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ದೋಚಿದ್ದಾರೆ.
ಸುಮಾರು 12.80 ಲಕ್ಷ ರೂ ಮೌಲ್ಯದ ಒಟ್ಟು 320 ಗ್ರಾಂ. ತೂಕದ ಚಿನ್ನಾಭರಣ ಹಾಗೂ 1520 ಗ್ರಾಂ. ತೂಕದ ಬೆಳ್ಳಿಯ ಆಭರಣಗಳು ಕಳ್ಳತನವಾಗಿವೆ.
ಮನೆಯಲ್ಲಿ ಶ್ರೀಮತಿ ಮಧು ಹಾಗೂ ಆಕೆಯ ಮಗ ವಾಸಿಸುತ್ತಿದ್ದು ಈಕೆಯ ಪತಿ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ.
ಮಧು ಕಚೇರಿಗೆ ಹೋಗಿದ್ದು, ಮಗ ಶಾಲೆಗೆ ಹೋದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ಅನೇಕ ದಿನಗಳಿಂದ ಪರಿಶೀಲಿಸಿ ಕೃತ್ಯ ಎಸಗಿದ್ದಾರೆನ್ನಲಾಗಿದೆ.
ಈ ಕುರಿತು ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ಸಪೆಕ್ಟರ್ ಜೆ.ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.
ಈ ಕಳುವಿನ ಘಟನೆಯ ಕುರಿತು ಸಿಸಿಟಿವಿಯಲ್ಲಿ ಮಹತ್ವದ ಸುಳಿವು ದೊರೆತಿದ್ದು ಕಳ್ಳರ ಚಲನವಲನದ ಮಾಹಿತಿಯಾದರಿಸಿ ಗೋಕುಲ ಪೊಲೀಸರು ಜಾಲ ಬೀಸಿದ್ದಾರೆನ್ನಲಾಗಿದೆ.