ಬೆಳಗಾವಿ: ಮನೆ ಸೋರುತ್ತಿರುವುದರಿಂದ ನೆರವು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅಜ್ಜಿಯ ನೋವಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಗುರುವಾರ ಸಭೆ ಬಿಟ್ಟು ಬಂದು ಮನವಿ ಆಲಿಸಿ ಕೂಡಲೇ ಕ್ರಮಕ್ಕೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಮಾನವೀಯತೆ ಮೆರೆದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಇದ್ದರು. ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಚೇರಿಯ ಹೊರ ಭಾಗದಲ್ಲಿ ಗಣಪತಿ ಗಲ್ಲಿಯ ವೃದ್ಧೆ ಬಂದು, ಮನೆ ಬೀಳುವ ಹಂತದಲ್ಲಿದೆ. ಮಳೆಯಿಂದ ಹೆಚ್ಚು ಸೋರುತ್ತಿರುವುದರಿಂದ ಮನೆಯಲ್ಲಿ ಇರಲು ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ನೆರವು ನೀಡುವಂತೆ ಕೇಳಿದರು. ಅಜ್ಜಿ ಕಚೇರಿ ಹೊರಗೆ ಬಂದಿರುವ ಬಗ್ಗೆ ಸಿಬ್ಬಂದಿಯೊಬ್ಬರು ಗಮನಕ್ಕೆ ತಂದಾಗ ಕೂಡಲೇ ಸಭೆ ಬಿಟ್ಟು ಹೊರ ಬಂದ ಜಿಲ್ಲಾಧಿಕಾರಿಗಳು, ಅಜ್ಜಿಯ ಮನವಿ ಆಲಿಸಿ ಕೂಡಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಬೇಕು ಎಂದು ಸೂಚಿಸಿದರು.