ಬೆಂಗಳೂರು: ಹವಾ ಮಾಡ್ತೀವಿ, ರೌಡಿಸಂ ಮಾಡ್ತೀವಿ, ಹೆಸರು ಮಾಡ್ತೀವಿ, ನಂದೆ ಹವಾ ಇರ್ಬೇಕು ಎಂದು ಓಡಾಡುತ್ತಿದ್ದವರಿಗೆ ಆನೇಕಲ್ ಉಪ ವಿಭಾಗದ ಪೊಲೀಸರು ಚಳಿ ಬಿಡಿಸಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ.
ಆನೇಕಲ್ ಉಪವಿಭಾಗದ ಏಳು ಠಾಣೆಯ ಪೋಲಿಸರು ಭಾನುವಾರ ಸ್ಪೆಷಲ್ ಡ್ರೈವ್ ಮಾಡಿ ರೌಡಿ ಶೀಟರ್ಸ್ ಗಳ ಮನೆಗಳಿಗೆ ತೆರಳಿ ರೈಡ್ ಮಾಡಿ ಸುಮಾರು ನೂರಕ್ಕು ಹೆಚ್ಚು ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಿದ್ದಾರೆ. ಇಂದು ಎಸ್ಪಿ ರವಿ.ಡಿ.ಚೆನ್ನಣ್ಣನವರ್ ನೇತೃತ್ವದಲ್ಲಿ ಎಲ್ಲ ಠಾಣೆಯ ರೌಡಿಗಳನ್ನು ಒಂದೆಡೆ ಕರೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೇನು ಹಬ್ಬ, ಬಿಬಿಎಂಪಿ ಚುನಾವಣೆ ಮತ್ತು ಪಂಚಾಯಿತಿ ಎಲೆಕ್ಷನ್ ಬರುತ್ತಿವೆ. ಈ ವೇಳೆ ಯಾರೂ ಬಾಲ ಬಿಚ್ಚಬಾರದು, ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಆನೇಕಲ್ ಠಾಣೆಯ ಮುಂಭಾಗದಲ್ಲಿ ಎಲ್ಲ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಕೆಲವರು ನಾನು ಅಲ್ಲಿ ಹವಾ ಇಟ್ಟಿದ್ದೇನೆ ಎಂದು ಪೊಲೀಸರಿಗೆ ಬೆದರಿಕೆ ಒಡ್ಡಿರುವ ಘಟನೆಗಳು ನಡೆದಿದ್ದು, ಇದೆಲ್ಲ ಇನ್ನು ಮುಂದೆ ನಡೆದರೆ ನಿಮ್ಮ ಬಾಲ ಕಟ್ ಮಾಡಬೇಕಾಗುತ್ತದೆ ರವಿ ಚೆನ್ನಣ್ಣನವರ್ ವಾರ್ನ್ ಮಾಡಿದ್ದಾರೆ.
ಇತ್ತೀಚೆಗೆ ಹೆಚ್ಚು ಸಕ್ರಿಯರಾಗಿದ್ದ ಕೆಲ ರೌಡಿ ಶೀಟರ್ ಗಳು ಇದೆಲ್ಲ ಬಿಟ್ಟು, ತಮ್ಮ ಪಾಡಿಗೆ ತಾವಿದ್ದರೆ ಒಳ್ಳೆಯದು. ರೌಡಿಸಂ ಅಂತ ಹೋದ್ರೆ ಅವರಿಗೆ ದೊಡ್ಡ ಶಾಸ್ತಿಯಾಗುತ್ತದೆ. ಸುಮ್ಮನಿದ್ದರೆ ಸರಿ ಇಲ್ಲವಾದಲ್ಲಿ ಊರು ಬಿಡಿಸಬೇಕಾಗುತ್ತದೆ, ಗೂಂಡಾ ಕಾಯ್ದೆ ಹಾಕಬೇಕಾಗುತ್ತದೆ ಎಂದಿದ್ದಾರೆ.