ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ನಗರದ ಜುಬ್ಲಿ ವೃತ್ತದಲ್ಲಿ ಏಕಾಏಕಿ ರಸ್ತೆ ತಡೆಮಾಡಿದ ಕಾರ್ಯಕರ್ತರು, ಬೆಲ್ಲದ್ ಪರ ಘೋಷಣೆ ಕೂಗಿದರು. ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿರುವ ನವನಗರದಲ್ಲಿ ಬೆಲ್ಲದ ಬೆಂಬಲಿಗರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಎಸ್ ಯಡಿಯೂರಪ್ಪ ಭಾವಚಿತ್ರದ ಮೇಲೆ ಧಿಕ್ಕಾರ ಎಂದು ಬರೆದು ಆಕ್ರೋಶ ವ್ಯಕ್ತ ಪಡಿಸಿದರು.
ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬೆಲ್ಲದ್ ಬೆಂಬಲಿಗರು, ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನಕ್ಕೆ ಆಗ್ರಹಿಸಿದರು. ಅಲ್ಲದೇ ಸಿಎಂ ರೆಸ್ನಲ್ಲಿದ್ದ ಬೆಲ್ಲದ್ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ್, ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಇವರುಗಳ ಹೆಸರನ್ನು ಈ ಬಾರಿ ಕೈ ಬಿಡಲಾಗಿದೆ.