ಬೆಳಗಾವಿ: ದುಡಿದ 2000 ರೂಪಾಯಿಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬ್ಲೇಡ್ ನಿಂದ ಕುಯ್ದು ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಕೊಲೆಯಾದ ವ್ಯಕ್ತಿಯ ಹೆಸರು ಮಹಾದೇವ್ ಜಾಧವ. ವಯಸ್ಸು 55ವರ್ಷ. ಬೆಳಗಾವಿಯ ವಡಗಾಂವ ನಿವಾಸಿ. ಕಳೆದ ಹಲವು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಇತ. ಇವತ್ತು ವಡಗಾಂವನ ಯಳ್ಳೂರು ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದಾನೆ.
ಹಾಡು ಹಗಲೇ ಜನ ಓಡಾಡುತ್ತಿರುವ ರಸ್ತೆಯಲ್ಲಿಯೇ ಕತ್ತು ಕೊಯ್ದು ಮಹಾದೇವ್ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
ರಸ್ತೆಯಲ್ಲಿ ರಕ್ತ ಚಲ್ಲಿತ್ತು. ಹೋಗು ಬರುವ ಜನರು ಸಹ ಯಾವ ಕಾರಣಕ್ಕಾಗಿ ಕೊಲೆ ನಡೆಯಿತು ಎನ್ನುವ ಗುಸುಗುಸು ಚರ್ಚೆಯಲ್ಲಿದ್ದರು.
ಮೃತನ ಸಂಬಂಧಿಗಳು ಸಹ ಯಾರು ಕೊಲೆ ಮಾಡಿದ್ದಾರೆ ಅಂತ ಗೊತ್ತಾಗದೇ ನಿಂತಿದ್ದರು.ಆದರೆ ಜನರ ಎದುರೆ ನಡೆದ ಕೊಲೆಯನ್ನ ನೋಡಿದ ಜನರು ಕೊಲೆಗಾರ ಇತನೇ ಅಂತ ಸಂಬಂಧಿಗಳ ಮುಂದೆ ಹೇಳಿದ್ದರು.
ಆರೋಪಿ ಹೇಳಿದ 2000 ರೂಪಾಯಿ ಕಥೆ…
ಪೋಲಿಸರು ಆರೋಪಿ ಯಾರು ಅಂತ ಪತ್ತೆ ಹಚ್ಚಿ ಕಾರಣ ಕೇಳಿದ್ರೆ, ಆರೋಪಿ ಹೇಳಿದ್ದು 2000ರೂಪಾಯಿ ಕಥೆ. ಮೃತ ಮಹಾದೇವ ಆರೋಪಿ ಇಬ್ಬರೂ ಗಾರೆ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ ದುಡಿದ 2000ರೂ ಹಣವನ್ನ ಮಹಾದೇವ ಆರೋಪಿಗೆ ನೀಡದೇ ತನ್ನ ಬಳಿ ಇಟ್ಟುಕೊಂಡಿದ್ದ.
ಈ ಹಣವನ್ನು ನೀಡುವಂತೆ ಕೇಳಲು ಆರೋಪಿ ಇವತ್ತು ಮಹಾದೇವನ ಮನೆಗೆ ಬಂದಿದ್ದನಂತೆ. ಮಾತನಾಡುತ್ತಾ ರಸ್ತೆ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ತನ್ನ ಬಳಿ ಇದ್ದ ಬ್ಲೇಡ್ ನಿಂದ ಆರೋಪಿ ಮಹಾದೇವನ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ.
ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿರುವ ಬೆಳಗಾವಿ ಗ್ರಾಮೀಣ ಠಾಣೆ ಪೋಲಿಸರು,ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿ ತನ್ನ ಹಾಗೂ ಮೃತ ಮಹಾದೇವನ ನಡುವಿನ ವ್ಯವಹಾರದ ಬಗ್ಗೆ ಬಾಯಿಬಿಟ್ಟಿದ್ದಾನೆ. ಕೋಪದಲ್ಲಿ ಈ ಕೆಲಸ ಮಾಡಿದ್ದಾಗಿ ತಿಳಿಸಿದ್ದಾನೆ. ಅದೇನೆ ಇರಲಿ ಜಸ್ಟ್ 2000ರೂ.ಗೆ ಒಂದು ಹೆಣ ಉರುಳಿಸಿದ್ದು ಮಾತ್ರ ವಿಪರ್ಯಾಸ…