ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚೂರಿಯಿಂದ ಪತ್ನಿಯ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ ಪತಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚಂದ್ರ ಲೇಔಟ್ನ ಗಂಗೊಂಡನಹಳ್ಳಿ ನಿವಾಸಿ ಸೈಯದ್ ಶಕೀರ್ (25) ಬಂಧಿತ. ಆತನ ಪತ್ನಿ ಬೇಬಿ ಆಯೇಷಾ (20) ಹತ್ಯೆಯಾದ ಮಹಿಳೆ.
ಆರೋಪಿ ಸೈಯದ್ ಕೆಲ ವರ್ಷಗಳ ಹಿಂದೆ ಆಯೇಷಾಳನ್ನು ವಿವಾಹವಾಗಿದ್ದ. ದಂಪತಿಗೆ 3 ಹಾಗೂ 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಕೋಲಾರದ ಬಾಗೆಪಲ್ಲಿಯಿಂದ ಕೆಲ ಸಮಯದ ಹಿಂದೆ ಚಂದ್ರ ಲೇಔಟ್ಗೆ ಬಂದು ನೆಲೆಸಿದ್ದರು. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿಯ ಕಿರುಕುಳ ಸಹಿಸಲಾರದೇ ಆಯೇಷಾ ಇತ್ತೀಚೆಗೆ ತನ್ನ ತಾಯಿಯನ್ನು ಮನೆಗೆ ಕರೆಸಿಕೊಂಡಿದ್ದಳು.
ಸೋಮವಾರ ಸಂಜೆ 6 ಗಂಟೆಗೆ ದಂಪತಿ ನಡುವೆ ಮತ್ತೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಮನೆಯಲ್ಲಿದ್ದ ಚೂರಿಯಿಂದ ಪತ್ನಿ ಆಯೇಷಾಳ ಕತ್ತು, ಹೊಟ್ಟೆ, ಎದೆ ಸೇರಿ ದೇಹದ ವಿವಿಧ ಭಾಗಗಳಿಗೆ ಇರಿದು ಸೈಯದ್ ಹತ್ಯೆ ಮಾಡಿದ್ದಾನೆ. ಈ ನಡುವೆ ಸೈಯದ್ ಕಾಲಿಗೂ ಗಾಯಗಳಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತಳ ತಾಯಿಯಿಂದ ಮಾಹಿತಿ: ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಂದ್ರ ಲೇಔಟ್ ಪೊಲೀಸರು ಆರೋಪಿ ಸೈಯದ್ನ್ನು ಬಂಧಿಸಿ ಕೃತ್ಯ ನಡೆದ ಸ್ಥಳ ಪರಿಶೀಲಿಸಿದ್ದಾರೆ. ಕೃತ್ಯ ನಡೆದಾಗ ಆಯೇಷಾ ತಾಯಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಆಯೇಷಾ ತಾಯಿಯಿಂದ ಪ್ರಕರಣಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.