ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೇ ಕೆಲಸ ಕಳೆದುಕೊಂಡು ಹಲವರು ಸಂಕಷ್ಟಕ್ಕೀಡಾಗಿದ್ದರೆ ಇನ್ನು ಹಲವರು ಕೆಲಸದ ಆಮಿಷವೊಡ್ಡಿ, ವಂಚನೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಳ್ಳುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಬ್ಯಾಂಕ್ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕನನ್ನು ಕರೆಸಿಕೊಂಡ ಖದೀಮನೊಬ್ಬ, ಆತನ ಬಳಿ ಇದ್ದ ಹಣ, ಎಟಿಎಂ, ಮೊಬೈಲ್, ಉಂಗುರಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಾಜಿ ನಗರದಲ್ಲಿರುವ ಬಂಧನ್ ಬ್ಯಾಂಕ್ ಹೆಸರಲ್ಲಿ ರಾಜನ್ ದೇಶ್ ಎಂಬಾತನಿಗೆ ಕರೆ ಮಾಡಿದ ವ್ಯಕ್ತಿ ಇಂಟರ್ ವ್ಯೂವ್ ಇದೆ ಬರುವಂತೆ ತಿಳಿಸಿ ಕಟ್ಟಡವೊಂದಕ್ಕೆ ಕರೆಸಿಕೊಂಡು ಆತನನ್ನು ಲಾಕ್ ಮಾಡಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ರಾಜನ್ ಬಳಿ ಇದ್ದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ವಂಚನೆಗೊಳಗಾದ ರಾಜನ್ ಕಟ್ಟಡದ ಕಿಟಕಿಯಿಂದ ತನ್ನನ್ನು ರಕ್ಷಿಸುವಂತೆ ಕೂಗಿಕೊಂಡಿದ್ದಾನೆ. ಇದನ್ನು ಗಮನಿಸಿದ ಪಕ್ಕದ ಅಂಗಡಿ ಮಾಲೀಕ ರಾಜನ್ ನನ್ನು ರಕ್ಷಿಸಿದ್ದಾನೆ. ಸದ್ಯ ಪೊಲೀಸರು ವಂಚಕನಿಗಾಗಿ ಬಲೆ ಬೀಸಿದ್ದಾರೆ.