ಬೆಂಗಳೂರು/ಉಡುಪಿ: ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ ಹಾಗೂ ಉದಯವಾಣಿ ಸಂಸ್ಥಾಪಕ ಟಿ ಮೋಹನ್ ದಾಸ್ ಎಂ ಪೈ (89) ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದಾಗಿ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇವರು ಡಾ ಟಿ ಎಂ ಎ ಪೈ ಫೌಂಡೇಶನ್, ಎಂಜಿಎಂ ಕಾಲೇಜ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು. ಮೃತರು ತಮ್ಮಂದಿರಾದ ಡಾಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸಹೋದರ ಟಿ.ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ. ಎಂಜಿಎಂ ಕಾಲೇಜಿನಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೋಹನ್ ದಾಸ್ ಪೈ ನಿಧನ ಹಿನ್ನೆಲೆಯಲ್ಲಿ ಇಂದು ಡಾ.ಟಿ ಎಂ ಎ ಪೈ ಫೌಂಡೇಶನ್ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.