ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ ಜೇಮ್ಸ್ ಮೂವಿಯ ಚಿತ್ರೀಕರಣ ನಾಳೆಯಿಂದ ಕಿಷ್ಕಿಂದ ಗುಡ್ಡದ ಪ್ರದೇಶದಲ್ಲಿ ನಡೆಯಲಿದೆ.
ಗಂಗಾವತಿ ತಾಲೂಕಿನ ಕಿಷ್ಕಿಂದ ಭಾಗವಾಗಿರುವ ಮಲ್ಲಾಪುರ ಮತ್ತು ವಾನಭದ್ರಪ್ಪ ಗ್ರಾಮದ ನಡುವೆ ಬೃಹತ್ ಸೆಟ್ ಹಾಕಲಾಗಿದೆ. ಚಿತ್ರದ ನಾಯಕ ಪುನೀತ್ ರಾಜಕುಮಾರ್ ಮತ್ತು ತೆಲುಗಿನ ಖ್ಯಾತ ನಟ ಶ್ರೀಕಾಂತ್ ಕೂಡ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಮಲ್ಲಾಪುರ ಗ್ರಾಮದ ಹೊರವಲಯದ ಗುಡ್ಡ ಪ್ರದೇಶದಲ್ಲಿ ಭವ್ಯ ಸೆಟ್ ಅನ್ನು ಹಾಕಲಾಗಿದೆ. ಹಳ್ಳಿ ಸೊಗಡಿನ ರೀತಿಯಲ್ಲಿ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ನಲ್ಲಿ ಫೈಟ್ ಸೀನ್ ಶೂಟಿಂಗ್ ನಡೆಯಲಿದೆ.
ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಚಿತ್ರ ತಂಡದ ಹಲವಾರು ಮಂದಿ ಶೂಟಿಂಗ್ಗಾಗಿ ಆಗಮಿಸಲಿದ್ದಾರೆ. ಚಿತ್ರದ ನಿರ್ಮಾಪಕರಾಗಿರುವ ಕಿಶೋರ್ ಪತ್ತಿಕೊಂಡ ಮೂಲತಃ ಹೊಸಪೇಟೆಯವರಾಗಿದ್ದು ಅವರ ಕಿಶೋರ್ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಅವರ ಅಪೇಕ್ಷೆಯ ಮೆರೆಗೆ ಗಂಗಾವತಿಯ ಕಿಷ್ಕಿಂದ ಭಾಗವನ್ನು ಆಯ್ಕೆ ಮಾಡಿಕೊಂಡು ಚಿತ್ರೀಕರಣಕ್ಕಾಗಿ ಸೆಟ್ ಸಿದ್ಧಮಾಡಿಕೊಳ್ಳಲಾಗಿದೆ.
ಗಂಗಾವತಿ ಕಿಷ್ಕಿಂದಾ ಭಾಗದಲ್ಲಿ ಪುನೀತ್ ರಾಜಕುಮಾರ್ ಅವರು ಈಗಾಗಲೇ ರಣವಿಕ್ರಮ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. ಆನೆಗುಂದಿ ಗ್ರಾಮದ ತುಂಗಾಭದ್ರ ತಟದಲ್ಲಿ ರಣವಿಕ್ರಮ ಚಿತ್ರ ಚಿತ್ರೀಕರಣಗೊಂಡಿತ್ತು. ಈಗ ಜೇಮ್ಸ್ ಚಿತ್ರೀಕರಣಕ್ಕೆ ಮತ್ತೆ ಪುನೀತ್ ರಾಜಕುಮಾರ್ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಯಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಲಾಕ್ಡೌನ್ ಆದ ಕಾರಣ ಚಿತ್ರೀಕರಣ ತಡವಾಗಿದೆ ಎಂದು ಚಿತ್ರತಂಡವರು ಹೇಳಿದ್ದಾರೆ.