ಬೆಂಗಳೂರು: ಪುತ್ರ ಚಿದಾನಂದ ಕಾರು ಅಪಘಾತ ಪ್ರಕರಣದಲ್ಲಿ ರೈತ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ, “ನನ್ನ ಮಗ ಡ್ರೈವಿಂಗ್ ಮಾಡಲ್ಲ. ಕಾರನ್ನು ಚಾಲಕ ಓಡಿಸುತ್ತಿದ್ದ” ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, “ನನ್ನ ಮಗ ಚಿದಾನಂದ ಡ್ರೈವಿಂಗ್ ಮಾಡಲ್ಲ. ಅವನಿಗೆ ಡ್ರೈವರ್ ಇದ್ದಾನೆ. ಮೊದಲಿನಿಂದಲೂ ಆತನೇ ಕಾರು ಓಡಿಸುವುದು. ನನ್ನ ಮಗ ಮುಂದೆ ಫಾರ್ಚುನ್ ಕಾರಲ್ಲಿದ್ದ. ಆತನ ಸ್ನೇಹಿತರು ಇನ್ನೊಂದು ಗಾಡಿಯಲ್ಲಿದ್ದರು. ಡಿವೈಡರ್ ಓಪನ್ ಇತ್ತು ಬೈಕ್ ಏಕಾಏಕಿ ಅಡ್ಡಬಂದಿದೆ. ಚಾಲಕನಿಗೆ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ವ್ಯಕ್ತಿಯನ್ನು ನನ್ನ ಮಗನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆತ ಮನೆಗೆ ಬಂದ ಬಳಿಕ ಆಸ್ಪತ್ರೆಯಿಂದ ಕರೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಪಘಾತದಂತಹ ಘಟನೆಯಲ್ಲಿ ಸಚಿವರ ಮಗನ ಹೆಸರು ಕೇಳಿಬಂದಾಗ ಕೆಲ ಚರ್ಚೆಗಳು ನಡೆಯುವುದು ಸಹಜ. ಪೊಲೀಸ್ ತನಿಖೆ ವೇಳೆ ಇದ್ದ ವಿಷಯವನ್ನು ಇದ್ದಂತೆಯೇ ಹೇಳಬೇಕು. ಕಾರು ಚಾಲಕನ ವಿಚಾರಣೆ ಕೂಡ ನಡೆದಿದೆ. ತನಿಖೆ ನಡೆಯುತ್ತಿದೆ ನೋಡೋಣ ಎಂದು ಹೇಳಿದರು.