ಕೊಪ್ಪಳ: ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಗಾಳಿಯಲ್ಲಿ ಮಾತಾಡುವ ಚಾಳಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.
ಇಂದು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರ್ ಖಂಡ್ರೆ, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ರು. ಬಿಜೆಪಿಗೆ ಹೋಗಿ ರಮೇಶ್ ಜಾರಕಿಹೊಳಿ ಸುಖವಾಗಿದ್ದಾರೆ ಅಂತ ಆತ್ಮಸಾಕ್ಷಿಯಾಗಿ ಹೇಳಲಿ ಎಂದು ಸವಾಲ್ ಹಾಕಿದರು.
ಬಿಜೆಪಿಯ ಹಿರಿಯ ನಾಯಕ, ಶಾಸಕ ಉಮೇಶ್ ಕತ್ತಿ ಜನಪರ ಕಾಳಜಿ ಹೊಂದಿದ್ದಾರೆ. ಬಿಜೆಪಿ ಅಕ್ರಮದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಪ್ರಶ್ನೆ ಮಾಡಿದಂತವರು. ಯಾರಿಗೆ ಜನಪರ ಕಾಳಜಿ ಇರುತ್ತೋ ಅವರು ಪ್ರಶ್ನೆ ಮಾಡುತ್ತಾರೆ ಎಂದು ಹೇಳುವ ಮೂಲಕ ಉಮೇಶ್ ಕತ್ತಿ ಪರ ಬ್ಯಾಟ್ ಬೀಸಿದರು. ನಾವೆಲ್ಲ ಕೊರೊನಾ ಸಂಕಷ್ಟದಲ್ಲಿದ್ದೇವೆ. ಈಗಾಗಲೇ ಕಾಂಗ್ರೆಸ್ ನೊಂದವರಿಗೆ ಸಹಾಯ ಹಸ್ತ ಚಾಚುತ್ತಿದೆ. ಆದ್ರೆ ಬಿಜೆಪಿಯ ಕೆಲ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗಿಲ್ಲ. ಸರ್ಕಾರ ವಿತರಣೆ ಮಾಡುವ ಅಹಾರ ಕಿಟ್ಟನಲ್ಲಿ ಬಿಜೆಪಿ ಸಿಂಬಲ್ ಮತ್ತು ಫೋಟೋ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು, ಬಿಜೆಪಿಯವರಿಗೆ ಸುಳ್ಳನ್ನೆ ಸತ್ಯ ಎಂದು ಬಿಂಬಿಸುವುದು ರೂಡಿಯಾದಂತಾಗಿದೆ. ಹಿಂದೆ ದಿನೇಶ್ ಗುಂಡುರಾವ್ ರವರೆ ಅಧ್ಯರಾಗಿದ್ದರು, ಇನ್ನೂ ಡಿಕೆ ಶಿವಕುಮಾರ್ ಅಧಿಕಾರ ಹಸ್ತಾಂತರ ಆಗದಿರುವ ಕಾರಣ ಬ್ಯಾಂಕ್ ಖಾತೆ ಬದಲಾವಣೆಯಾಗಿಲ್ಲ. ಅದರಿಂದ ಹಣ ಖಾತೆಗೆ ಜಮಾ ಆಗಿಲ್ಲ, ಇದೇ ಜೂನ್ 7 ರಂದು ಅಧಿಕಾರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಹೇಳಿದರು.