Breaking News
Home / ಅಂತರಾಷ್ಟ್ರೀಯ / ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ.

ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ.

Spread the love

ಅಫಜಲಪುರ: ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ. ತಾಲ್ಲೂಕಿನ ಭೀಮಾ ಬ್ಯಾರೇಜಿನ ಹಿನ್ನೀರಿನಿಂದ ಕರಜಗಿ ಹೋಬಳಿಯ ಸುಮಾರು 20 ಗ್ರಾಮಗಳು ಮೂರಾಬಟ್ಟೆಯಾಗಿವೆ.

ಸೊನ್ನ ಬ್ಯಾರೇಜನಿಂದ ಭೀಮಾ ನದಿಗೆ ಶನಿವಾರ 8.50 ಲಕ್ಷ ಕ್ಯುಸೆಕ್‌ ನೀರು ಹರಿಬಿಡುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೀಮಾ ತೀರದ ಮಣ್ಣೂರ, ಹೊಸುರ, ಶೇಷಗೀರಿ, ಉಡಚಣ, ಭೋಸಗಾ, ಅಳ್ಳಗಿ(ಬಿ), ಗೌರ, ಬಂಕಲಗಾ, ಶಿರವಾಳ, ದಿಕ್ಸಂಗಾ, ತೆಲ್ಲುಣಗಿ, ನಂದರಗಿ ಸೇರಿದಂತೆ ಹಲವು ಹಳ್ಳಿಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆ ಆಗಿವೆ.

ಭೀಮಾ ನದಿಯ ದಂಡೆಗಳಲ್ಲಿ ಜನ ಮತ್ತು ಜಾನುವಾರುಗಳನ್ನು ತೆಗೆದುಕೊಂಡು ಹೋಗದಂತೆ ಜಾಗೃತಿ ಮೂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿ ಕೋಟಿಗಟ್ಟಲೇ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳು ಜಲ ದಿಗ್ಬಂಧನದಲ್ಲಿವೆ.

1981 ಹಾಗೂ 2006ರಲ್ಲಿ ಸಂಭವಿಸಿದ ಪ್ರವಾಹ ಹಾನಿಗಿಂತಲೂ ಈಗ ಸಂಭವಿಸಿರುವ ಹಾನಿ ಅತಿ ಹೆಚ್ಚು. ತಾಲ್ಲೂಕಿನಲ್ಲಿ ಬೆಳೆದ ಕಬ್ಬು, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ರೈತರು ಮತ್ತು ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ಥಿತಿಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಭೇಟಿ ನೀಡಿಲ್ಲ. ಪ್ರವಾಹ ಪೀಡಿತ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದೇ ಇದಕ್ಕೆ ಶಾಶ್ವತ ಪರಿಹಾರವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಂತ್ರಸ್ತರು ತಿಳಿಸಿದರು.

ತಹಶೀಲ್ದಾರ ವರದಿ: ತಾಲ್ಲೂಕಿನಲ್ಲಿ 20 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರವಾಹ ಪೀಡಿತ ಗ್ರಾಮಗಳಿಂದ 5126 ಜನರನ್ನು ಸ್ಥಳಾಂತರ ಮಾಡಲಾಗಿದೆ. ಹಲವು ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ. ಪ್ರವಾಹ ಇಳಿದ ನಂತರ ಮನೆಗಳು ಹಾಗೂ ಹಾಳಾದ ಬೆಳೆಗಳ ಬಗ್ಗೆ ಸಮೀಕ್ಷೆ ಮಾಡಲಾಗುವುದು ಎಂದು ತಹಶೀಲ್ದಾರ್‌ ಬಸಲಿಂಗಪ್ಪ ನಾಯ್ಕೋಡಿ ತಿಳಿಸಿದರು.

ಕರಜಗಿ ಹೋಬಳಿಯ 15 ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಿವಬಸಪ್ಪ ಟಕ್ಕಳಗಿ ಹಾಗೂ ಶಂಕರ ಚಿಕ್ಕಳ್ಳಿ ಅವರು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು. ನಂದರಗಿ ಮತ್ತು ಜೇವರ್ಗಿ ಗ್ರಾಮಗಳಲ್ಲಿ ಸುಮಾರು 200 ಮನೆಗಳಿಗೆ ಹಾನಿಯಾಗಿದೆ. ದವಸ ಧಾನ್ಯಗಳು ಹಾಳಾಗಿವೆ ಎಂದು ತಿಳಿಸಿದರು.

ಕಾಳಜಿ ಕೇಂದ್ರ ನಿರ್ವಹಣೆ ಮಾಡಿ: ಸರ್ಕಾರ ತಾಲ್ಲೂಕಿನಲ್ಲಿ ಪ್ರವಾಹ ಪೀಡಿತರಿಗಾಗಿ 20 ಕಾಳಜಿ ಕೇಂದ್ರ ಆರಂಭಿಸಿದೆ. ಪ್ರವಾಹ ಪೀಡಿತರಿಗೆ ಕುಡಿಯುವ ನೀರು, ಸರಿಯಾದ ಊಟದ ವ್ಯವಸ್ಥೆ, ಹಾಸಿಗೆ ಹೊದಿಕೆ ವ್ಯವಸ್ಥೆ ಮಾಡಬೇಕು. ಕಾಳಜಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಬಗ್ಗೆ ಪ್ರವಾಹ ಪೀಡಿತರು ಸಾಕಷ್ಟು ದೂರು ನೀಡಿದ್ದಾರೆ ಎಂದು ಅವರು ತಿಳಿಸಿದರು.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ