ಕಲಬುರಗಿ: ಭೀಮಾ ನದಿಗೆ 5.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಫಿರೋಜಾಬಾದ್ಗೆ ಪ್ರವಾಹದ ನೀರು ನುಗ್ಗಿದೆ. ಹಾಗಾಗಿ, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಡಳಿತ ಮುನ್ಸೂಚನೆ ನೀಡುತ್ತಿದೆ. ಜೊತೆಗೆ, ನದಿ ಪಾತ್ರದ ಹಳ್ಳಿಗಳ ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ತೆರಳಲು ನೋಡಲ್ ಅಧಿಕಾರಿಗಳು ವಿನಂತಿ ಸಹ ಮಾಡುತ್ತಿದ್ದಾರೆ.
ಆದರೆ, ಬಂದಿದ್ದು ಬರಲಿ ನಾನು ಇಲ್ಲೇ ಇರುವೆ ಎಂದು ಕಲ್ಲುಬಂಡೆಯಂತೆ ಫಿರೋಜಾಬಾದ್ ವೃದ್ಧೆಯೊಬ್ಬರು ತಮ್ಮ ಮನೆಯನ್ನ ಬಿಟ್ಟು ಬರುತ್ತಿಲ್ಲ. ಕಳೆದ 2 ದಿನಗಳಿಂದ ತಮ್ಮ ಮನೆ ಛಾವಣಿ ಏರಿ ಕುಳಿತಿರುವ 76 ವರ್ಷದ ವೃದ್ಧೆ ಕಲ್ಲಮ್ಮ ಜಪ್ಪಯ್ಯಾ ಅಂದ್ರೂ ತಮ್ಮ ನಿವಾಸ ತೊರೆದು ಬರುತ್ತಿಲ್ಲ.
ತಮ್ಮ ಮನೆ ಜಲಾವೃತಗೊಂಡ ಹಿನ್ನೆಲೆಯಲ್ಲಿ ಛಾವಣಿ ಮೇಲೆ ಕುಳಿತಿರುವ ಕಲ್ಲಮ್ಮ ಕೊರೆಯುವ ಚಳಿಯಲ್ಲೂ ಛಾವಣಿ ಮೇಲೆಯೇ ಠಿಕಾಣಿ ಹೂಡಿದ್ದಾರೆ. ಎರಡು ದಿನಗಳಿಂದ ವೃದ್ಧೆ ಅನ್ನ ನೀರು ಇಲ್ಲದಿದ್ದರೂ ಮನೆ ಬಿಟ್ಟು ಹೊರ ಬರಲು ನಿರಾಕರಿಸುತ್ತಿದ್ದಾರೆ. ಯಾರು ಎಷ್ಟೇ ಮನವೊಲಿಸಲು ಯತ್ನಿಸಿದರು ಕಲ್ಲಮ್ಮ ಡೋಂಟ್ ಕೇರ್. ಸದ್ಯ ಭೀಮಾ ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಜ್ಜಿಗೆ ಆತಂಕ ಹೆಚ್ಚಾಗಿದೆ.