ಕೋಲಾರ: ಬಾಳಿ ಬದುಕಬೇಕಿದ್ದ ಮೂವರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋದವರು ಬಾರದ ಲೋಕಕ್ಕೆ ಹೋಗಿದ್ದರಿಂದ ಹೆತ್ತವರು ದಿಕ್ಕೇ ತೋಚದಂತಾಗಿದ್ದಾರೆ. ರೈಲ್ವೆ ಇಲಾಖೆಯವರು ಮಾಡಿರೋ ಅವೈಜ್ಞಾನಿಕ ಕಾಲುವೆ ಇದಕ್ಕೆಲ್ಲ ಕಾರಣವಾಗಿದೆ.
ಮೊನ್ನೆ ಕೋಲಾರ ಜಿಲ್ಲೆ ಬಂಗಾರಪೇಟೆ ಸುತ್ತಮುತ್ತ ಭರ್ಜರಿ ಮಳೆ ಸುರಿದಿತ್ತು. ಪರಿಣಾಮ ಕುಂಬಾರಪಾಳ್ಯದ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು.
ಈ ವೇಳೆ ತಮ್ಮ ಮನೆಯಲ್ಲಿದ್ದ ಕುರಿಗಳನ್ನ ಮೇಯಿಸುತ್ತಾ ಅಲ್ಲೇ ಆಟವಾಡಿಕೊಂಡಿದ್ದ ಮಕ್ಕಳು ನೀರಿಗೆ ಇಳಿದಿದ್ದಾರೆ. ನೀರಿನ ಆಳ ತಿಳಿಯದೆ ಇಳಿದ ಮೂರು ಜನ ಮಕ್ಕಳು ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಎಷ್ಟು ಹೊತ್ತಾದ್ರು ಮನೆಗೆ ಬಾರದ ಮಕ್ಕಳನ್ನು ಹುಡುಕಾಡಿದಾಗ, ತಂದೆ ಅಮ್ಜದ್ಗೆ ಮಕ್ಕಳ ಶವ ಸಿಕ್ಕಿದೆ. ಮೃತರನ್ನ 8 ವರ್ಷದ ಬಾಲಕಿ ರುಕ್ಸರ್, 10 ವರ್ಷದ ಸಾಧಿಕ್ ಹಾಗೂ 7 ವರ್ಷದ ಫಯಾಜ್ ಅಂತಾ ಗುರುತಿಸಲಾಗಿದೆ.
ಈ ಮೂರು ಮಕ್ಕಳ ಸಾವಿಗೆ ರೈಲ್ವೆ ಇಲಾಖೆ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಅವೈಜ್ಞಾನಿಕ ರೈಲ್ವೆ ಅಂಡರ್ಪಾಸ್ ಕಾಮಗಾರಿ ಮಕ್ಕಳ ಸಾವಿಗೆ ಕಾರಣ ಅಂತಿದ್ದಾರೆ. ಅಂಡರ್ಪಾಸ್ನಲ್ಲಿ ಪ್ರತಿಬಾರಿ ಮಳೆ ಬಂದಾಗ ನೀರು ತುಂಬಿಕೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಅಂಡರ್ ಪಾಸ್ ಪಕ್ಕದಲ್ಲಿ ಕಾಲುವೆ ಮಾಡಿ ನೀರನ್ನು ಬಿಡಲಾಗಿತ್ತು. ಇದೇ ಮಕ್ಕಳ ಸಾವಿಗೆ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಅಲ್ದೆ, ಮಕ್ಕಳ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಅಂತಾ ಆಗ್ರಹಿಸಿದ್ದಾರೆ.
ಒಟ್ಟಾರೆ ಬಾಳಿ ಬದುಕಬೇಕಿದ್ದ ಮೂರು ಮಕ್ಕಳನ್ನು ಬಲಿ ಪಡೆದಿರು ಇದೇ ರೀತಿಯ ಅವೈಜ್ಞಾನಿಕ ರೈಲ್ವೆ ಅಂಡರ್ಪಾಸ್ಗಳು ಜಿಲ್ಲೆಯಲ್ಲಿ ಹತ್ತಾರಿವೆ. ಇಂತ ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೊದಲು ಸಂಬಂಧ ಪಟ್ಟವರು ಅವೈಜ್ಞಾನಿಕ ಅಂಡರ್ಪಾಸ್ಗಳನ್ನ ಸರಿ ಪಡಿಸಬೇಕಿದೆ.