ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವದ ವಿಶೇಷ ದಿನದಂದು ಶಾಲೆಯ 12 ಪ್ರತಿಭಾವಂತ ವಿದ್ಯಾರ್ಥಿಗಳು ಹೆಲಿಕಾಪ್ಟರ್ನಲ್ಲಿ ಹಾರಾಡಿ ಸಂಭ್ರಮಿಸಿದ್ದಾರೆ. ಕಡೇನಂದಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಪ್ರತಿಭಾನ್ವಿತರಾದ ಮಕ್ಕಳನ್ನು ಹೆಲಿಕಾಪ್ಟರ್ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರಂತೆ ಜಾನ್ಹವಿ, ಧ್ರುವ, ಹೇಮಂತ್, ಜೀವಿತಾ, ಚಂದನ್, ನಂದನ್, ವಿದ್ಯಾಶ್ರೀ, ಪೃಥ್ವಿಕ್, ರಚಿತಾ, ವಿಜಯ್, ಅನುಶ್ರೀ ಹಾಗೂ ಜೀವನ್ ಹೆಲಿಕಾಪ್ಟರ್ ಹತ್ತಿ ಸಂಭ್ರಮಿಸಿದ್ದಾರೆ.
ಕಡೇನಂದಿಹಳ್ಳಿಯ ಸರ್ಕಾರಿ ಶಾಲೆಯನ್ನು ಹಳೇ ವಿದ್ಯಾರ್ಥಿಗಳ ಸಂಘ ನೇತೃತ್ವದಲ್ಲಿ ಬೆಂಗಳೂರು ಮೂಲದ ವಿಶ್ವಾಗ್ರಹ ಫೌಂಡೇಶನ್ ಸಂಸ್ಥೆ ದತ್ತು ಪಡೆದಿದೆ. ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಂದು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನ ವಿಶ್ವಾಗ್ರಹ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಿವಕುಮಾರ್ ಅವರು ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಇದಕ್ಕಾಗಿ ಶಾಲೆಯ ಬಳಿಯ ಹೆಲಿಪ್ಯಾಡ್ ಕೂಡ ನಿರ್ಮಾಣ ಮಾಡಲಾಗಿತ್ತು.
ಈ ಕಾರ್ಯಕ್ರಮ ಮುಗಿದ ಬಳಿಕ ಸರ್ಕಾರಿ ಶಾಲೆಯ ಮಕ್ಕಳು ಉನ್ನತ ಕನಸುಗಳನ್ನು ಕಾಣಬೇಕು ಮತ್ತು ಶಿಕ್ಷಣದ ಕಡೆಗೆ ಹೆಚ್ಚಿನ ಸ್ಪೂರ್ತಿ ಪಡೆಯಬೇಕು ಎಂಬ ಸದುದ್ದೇಶದಿಂದ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
Laxmi News 24×7