Home / Uncategorized / ಹುಕ್ಕೇರಿ, ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಇಲ್ಲ

ಹುಕ್ಕೇರಿ, ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಇಲ್ಲ

Spread the love

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿಲ್ಲ. ವಿಧಾನಸಭಾ ಚುನಾವಣೆಗೆ ಏಳು ತಿಂಗಳುಗಳು ಬಾಕಿ ಇರುವುದರಿಂದ ಉಪಚುನಾವಣೆ ಘೋಷಣೆ ಮಾಡಿಲ್ಲ ಎಂದು ಹೇಳಲಾಗಿದೆ.

 

ಬೆಂಗಳೂರು : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ.

ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ” ಸಾರ್ವತ್ರಿಕ ಚುನಾವಣೆ” ನಡೆಯಲಿರುವುದರಿಂದ ಕೇಂದ್ರ ಚುನಾವಣೆ ಆಯೋಗ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ.

 

ಸಚಿವರಾಗಿದ್ದ ಉಮೇಶ ಕತ್ತಿ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಚಂದ್ರಶೇಖರ ಮಾಮನಿ ಅವರ ಅಗಲಿಕೆಯಿಂದ ತೆರವಾಗಿರುವ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಕೇಂದ್ರ ಚುನಾವಣೆ ಆಯೋಗ ವಾಡಿಕೆಯಂತೆ ಉಪ ಚುನಾವಣೆ ನಡೆಸಬೇಕಿತ್ತು. ಉಪಚುನಾವಣೆ ನಡೆದ ಕೆಲವೇ ತಿಂಗಳಲ್ಲಿ ಈ ಎರಡೂ ಕ್ಷೇತ್ರಕ್ಕೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುವುದರಿಂದ ಉಪ ಚುನಾವಣೆಯ ನಡೆಸುವ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಹೆಚ್ಚು ಆಸಕ್ತಿ ವಹಿಸಿಲ್ಲ ಎನ್ನಲಾಗಿದೆ.

 

ವಿಧಾನಸಭೆ ಚುನಾವಣೆಗೆ ಕೇವಲ 7 ತಿಂಗಳು ಬಾಕಿ : ಸಾಮಾನ್ಯವಾಗಿ ಹಾಲಿ ಶಾಸಕರ ರಾಜೀನಾಮೆಯಿಂದ ತೆರವಾದ ಅಥವಾ ಶಾಸಕರ ನಿಧನದಿಂದ ಖಾಲಿಯಾಗುವ ವಿಧಾನಸಭೆ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣೆ ಆಯೋಗದ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ 7 ತಿಂಗಳು ಬಾಕಿಯಿರುವಾಗ ಉಪ ಚುನಾವಣೆ ನಡೆಸುವುದು ಎಷ್ಟು ಸಮಂಜಸ ಎನ್ನುವ ಕಾರಣಕ್ಕೆ ಕೇಂದ್ರ ಚುನಾವಣೆ ಆಯೋಗವು ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಹುಕ್ಕೇರಿ ಹಾಗೂ ಸವದತ್ತಿಗೆ ಉಪ ಚುನಾವಣೆ ಘೋಷಣೆ ಮಾಡಿಲ್ಲ: ಈ ಕಾರಣಕ್ಕಾಗಿಯೇ ಕೇಂದ್ರ ಚುನಾವಣೆ ಆಯೋಗವು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಾಗ ರಾಜ್ಯದ ಹುಕ್ಕೇರಿ ಹಾಗೂ ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಿಲ್ಲ.

 

ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿಯಾಗಿದ್ದ ಸಂಸದ ಮುಲಾಯಂ ಸಿಂಗ್ ಯಾದವ್ ಕ್ಷೇತ್ರ ಉತ್ತರ ಪ್ರದೇಶದ ಮೈನ್ ಪುರಿ ಸೇರಿದಂತೆ 5 ರಾಜ್ಯಗಳಾದ ಓಡಿಶಾ, ರಾಜಸ್ಥಾನ, ಬಿಹಾರ್,ಉತ್ತರ ಪ್ರದೇಶ ಮತ್ತು ಛತ್ತೀಸ​​​ಗಢ ರಾಜ್ಯಗಳಲ್ಲಿ ತೆರವಾಗಿರುವ ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ಆಯೋಗ ಇಂದು ವೇಳಾಪಟ್ಟಿ ಘೋಷಿಸಿದೆ.

 

ಆದರೆ ಕರ್ನಾಟಕದ ಹುಕ್ಕೇರಿ ಹಾಗು ಸವದತ್ತಿ ಕ್ಷೇತ್ರಗಳಿಗೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟಿಸದಿರುವ ಸಂಗತಿಯು ಚುನಾವಣೆ ಆಯೋಗವು ಬೈ ಎಲೆಕ್ಷನ್ ಬದಲಿಗೆ ಜನರಲ್ ಎಲೆಕ್ಷನ್ ನಡೆಸಲು ತೀರ್ಮಾನಿಸಿರುವುದನ್ನು ಖಚಿತಪಡಿಸುತ್ತದೆ.

ಬೇರೆ ರಾಜ್ಯಗಳ ವಿಧಾನಸಭೆಗೆ ಕೇಂದ್ರ ಚುನಾವಣೆ ಆಯೋಗ ಡಿಸೆಂಬರ್ ಮೊದಲ ವಾರ ಚುನಾವಣೆ ನಡೆಸುತ್ತಿದ್ದು, ಈ ಪ್ರಕಾರ ರಾಜ್ಯದ ಹುಕ್ಕೇರಿ ಮತ್ತು ಸವದತ್ತಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಿದರೂ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿ ಬಂದ ಅಭ್ಯರ್ಥಿಗಳಿಗೆ ಐದು ತಿಂಗಳಾದರೂ ಶಾಸಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತಿತ್ತು.

 

ರಾಜಕೀಯ ಪಕ್ಷಗಳಿಗೂ ನಿರಾಸಕ್ತಿ : ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳಿಗೂ ನಿರಾಸಕ್ತಿ ಇದೆ. ಕೆಲವೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಉಪಚುನಾವಣೆ ನಡೆಸುವ ಅಗತ್ಯತೆ ಇಲ್ಲ ಎನ್ನುವ ಅಭಿಪ್ರಾಯ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದಾಗಿವೆ. ಎರಡೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು. ಉಪ ಚುನಾವಣೆ ಎದುರಿಸುವ ಕುರಿತು ರಾಜಕೀಯ ಪಕ್ಷಗಳೂ ಸಹ ಹೆಚ್ಚು ಗಮನಹರಿಸಿಲ್ಲ. ಜನರಲ್ ಎಲೆಕ್ಷನ್ ಕಡೆಯೇ ಹೆಚ್ಚಿನ ಗಮನವಹಿಸಿದ್ದರಿಂದ ಉಪ ಚುನಾವಣೆ ನಡೆಸದಿರುವ ಕೇಂದ್ರ ಚುನಾವಣೆ ಆಯೋಗದ ಕ್ರಮವನ್ನು ಯಾವ ಪಕ್ಷಗಳೂ ಪ್ರಶ್ನಿಸುತ್ತಿಲ್ಲ.


Spread the love

About Laxminews 24x7

Check Also

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

Spread the loveಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ