ಬೆಳಗಾವಿ: ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ ಗನ್ ತೋರಿಸಿ ಬೆದರಿಸಿದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊದಲ ಆರೋಪಿಯಾಗಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಕೊಟ್ಟ ದೂರು ಮತ್ತು ದಾಖಲಾದ FIR ಅಂಶಗಳ ಅನ್ವಯ ಖಾನಾಪುರ ತಾಲೂಕಿನ ಕಸಮಳ್ಳಿ ಗ್ರಾಮದಿಂದ ಬರುತ್ತಿದ್ದ ಬೆಳಗಾವಿ ಶಹಾಪುರದ ಇನ್ನೋವಾ ಕಾರು ರಸ್ತೆ ತಗ್ಗಿನ ಬಳಿ ಮುಂದಿನ ಸ್ವಿಫ್ಟ್ ಗೆ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ ಸಂಬಂಧಿಕರು ಇದ್ದ ಸ್ವಿಫ್ಟ್ ಕಾರಿಗೆ ನಾವಗೆ ಕ್ರಾಸ್ ಬಳಿ ಹಿಂದಿನಿಂದ ಇನ್ನೋವಾ ತಾಗಿದ್ದರಿಂದ ಕುಪಿತಗೊಂಡ ಸಿಪಿಐ ಸಂಬಂಧಿಕರು ಹಾಗೂ ಇತರರು ಇನ್ನೋವಾ ಕಾರನಲ್ಲಿದ್ದವರನ್ನು ಥಳಿಸಿದ್ದು ಬೆಳಕಿಗೆ ಬಂದಿದೆ.
ಸ್ವಿಫ್ಟ್ ಕಾರು ವೇಗ ಕಡಿಮೆಯಾಗಿದ್ದರಿಂದ ಹಾಗೂ ರಸ್ತೆ ತಗ್ಗಿನ ಸಂಬಂಧ ವಾಹನ ತಾಗಿದ್ದು, ಆಗಿರುವ ಡ್ಯಾಮೇಜಗೆ ಹಣ ಕೊಡುವುದಾಗಿ ಬೇಡಿಕೊಂಡ ಸಂದರ್ಭ ಸುಮೊದಲ್ಲಿ ಬಂದ ಸಿಪಿಐ ಕಲ್ಯಾಣಶೆಟ್ಟಿ ಹಾಗೂ ಇತರರು ತೀವ್ರ ಹಲ್ಲೆ ನಡೆಸಿ ಗನ್ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ಪ್ರಿಯಾಂಕಾ ಸುನೀಲ ಕರುಣಕರ ಕುಟುಂಬ ಅಲವತ್ತುಕೊಂಡಿದೆ.
ಸಿಪಿಐ ಅನುಚರ ತುಷಾರ ಎಂಬಾತ ಅತಿರೇಕದ ವರ್ತನೆ ಮಾಡಿ ಹೆಂಗಸರು ಹಾಗೂ ಯುವಕ ಹುಡುಗರನ್ನು ತೀವ್ರ ಥಳಿಸಿದ್ದನ್ನು ದೂರಿನಲ್ಲಿ ದಾಖಲಿಸಿದ್ದಾರೆ. ಸಿಪಿಐ ಕಲ್ಯಾಣಶೆಟ್ಟಿ ತಾನು ‘ಬೆಳಗಾವಿಯ ಡಾನ್’ ನನ್ನನ್ನು ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಯಾರಿಗಾದರೂ ದೂರು ಕೊಟ್ಟರೆ ಜೀವಸಹಿತ ಬಿಡುವುದಿಲ್ಲ, ನಿಮ್ಮನ್ನೆಲ್ಲ ಅತ್ಯಾಚಾರ ಮಾಡಿ ತಗ್ಗಿನಲ್ಲಿ ಹಾಕಿ ಹೋಗುತ್ತೇನೆ ಎಂದು ಈ ಸಿಪಿಐ ಸಾಹೇಬರು ಧಮಕಿ ಹಾಕಿರುವ ಬಗ್ಗೆ ಕುಟುಂಬ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಬರೆದಿದೆ. ಗ್ರಾಮೀಣ ಠಾಣೆ PSI ದೂರು ಸ್ವೀಕರಿಸಿದ್ದು ಹುಕ್ಕೇರಿ ಸಿಪಿಐ ಕಲ್ಯಾಣ ಶೆಟ್ಟಿಯನ್ನು ಮೊದಲ ಆರೋಪಿ ಮಾಡಿ ಆತನ ಐವರು ಸಹಚರರನ್ನು ಇತರ ಆರೋಪಿಗಳನ್ನಾಗಿ ಮಾಡಲಾಗಿದೆ. ಐಪಿಸಿ ಸೆಕ್ಷನ್ 143, 147, 148, 324, 354, 504, 506 ಹಾಗೂ r/w 149 ಅಡಿ ಪ್ರಕರಣ ದಾಖಲಾಗಿದೆ.