ಹುಬ್ಬಳ್ಳಿ: ದಿನ ಕಳೆದಂತೆ ಚೋಟಾ ಮುಂಬೈನಲ್ಲಿ ಬಡಾ ಮುಂಬೈಯನ್ನೂ ಮೀರಿಸುವಂತೆ ರೌಡಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಕ್ಷುಲ್ಲಕ ಕಾರಣಕ್ಕೆ ಮಚ್ಚು ಲಾಂಗುಗಳು ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಹಾಡಗಲೇ ಗುಂಡಿನ ದಾಳಿ ನಡೆದಿದ್ದು, ಇನ್ನೂ ಹಸಿಯಾಗಿರುವಾಗ್ಲೇ ಈಗ ಮತ್ತೋಂದು ಗುಂಪು ದಾದಾಗಿರಿ ನಡೆಸಿದೆ.
ಇತ್ತೀಚೆಗೆ ಅವಳಿನಗರದಲ್ಲಿ ಎಲ್ಲವೂ ಸರಿಯಿಲ್ಲಾ ಅನ್ನೋದಕ್ಕೆ ಸಾಕಷ್ಟು ದುರ್ಘಟನೆಗಳು ಸಾಕ್ಷಿಯಾಗುತ್ತಿವೆ. ಹಾಡಹಗಲೇ ಫೈರಿಂಗ್. ಜನರ ಶಾಂತಿ ಕದಡುತ್ತಿರುವ ಕೊಲೆಗಳು. ಹೀಗೆ ಹುಬ್ಬಳ್ಳಿಯಲ್ಲಿ ಜನರು ನಡುಗುತ್ತಿದ್ದಾರೆ. ಈ ನಡುವೆ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ರೌಡಿಗಳ ಗುಂಪು ಅಮಾಯಕರ ಮೇಲೆ ಮನಸ್ಸಿಗೆ ಬಂದಂತೆ ಹಲ್ಲೆ ನಡೆಸಿದೆ. ರಾಡ್, ಕಲ್ಲುಗಳಿಂದ ಮೂವರ ಮೇಲೆ ದಾಳಿ ಮಾಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ರೌಡಿ ಗ್ಯಾಂಗ್ ಹಲ್ಲೆ ಮಾಡಿರೋದು ಹುಬ್ಬಳ್ಳಿ ಜನರನ್ನ ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಪೋಲಿಸರು ಸಿರಾಜ್ ಹೆಡೆಮುರಿ ಕಟ್ಟೋದ್ರಲ್ಲಿ ಸಕ್ಸಸ್ ಕಂಡಿದ್ದಾರೆ. ಇಬ್ಬರನ್ನ ಬಂಧಿಸಿದ್ದು ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಪದೇಪದೆ ಅವಳಿ ನಗರದಲ್ಲಿ ನಡೀತಿರೋ ಅಪರಾಧ ಚಟುವಟಿಕೆಗಳು ಜನರ ನೆಮ್ಮದಿ ಹಾಳುಮಾಡಿವೆ. ಕಳೆದ ಕೆಲ ತಿಂಗಳಿಂದ ಮಹಾನಗರ ಡಿಸಿಪಿ ಹುದ್ದೆ ಖಾಲಿಯಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ ಚೋಟಾ ಮುಂಬೈಯಲ್ಲಿ ಅಪರಾಧಗಳು ಬಡಾ ಮುಂಬೈ ಅನ್ನೂ ನಾಚಿಸುವಂತೆ ಹೆಚ್ಚಿವೆ. ಕೂಡಲೇ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದ್ರೆ ಪುಡಿ ರೌಡಿಗಳು ಹಾಗೂ ಖತರ್ನಾಕ್ಗಳ ಆಟಾಟೋಪಕ್ಕೆ ಬ್ರೇಕ್ ಹಾಕೋದು ಕಷ್ಟವಾಗಲಿದೆ.