ಗದಗ: ಮಳೆ ರಾಯನ ಆರ್ಭಟಕ್ಕೆ ಮನೆಯ ಶೀಟ್ಗಳು ಹಾರಿ ಹೋಗಿ, ಮನೆ ಸಂಪೂರ್ಣ ನಾಶವಾಗಿವೆ. ಪುಟ್ಟ ಮನೆಗಳಲ್ಲೇ ವಾಸಿಸುತ್ತಿದ್ದ ಬಡ ಕುಟುಂಬಗಳು ಸೂರು ಇಲ್ಲದೆ ಕಣ್ಣೀರಿಡುತ್ತಿವೆ.
ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಮಾಲರ ಕಾಲೋನಿಯ ಕಳಕವ್ವ ತಳವಾರ ಅವರ ಮನೆಯ ಶೀಟ್ಗಳು ಹಾರಿಹೋಗಿವೆ. ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಬಿರುಗಾಳಿ ಮಳೆ ಸುರಿಯುವ ಸಂದರ್ಭದಲ್ಲಿ ಮನೆಯಲ್ಲಿ ಗರ್ಭಿಣಿ ಹಾಗೂ ಚಿಕ್ಕಮಕ್ಕಳು ಸಹ ಇದ್ದು, ಭಯದಿಂದಲೇ ಜೀವ ಕೈಯ್ಯಲ್ಲಿ ಹಿಡಿದು ಕುಳಿತಂತಾಗಿತ್ತು.
ಹಮಾಲರ ಕಾಲೋನಿಯಲ್ಲಿ ಹತ್ತಾರು ವರ್ಷಗಳಿಂದ ಈ ಕುಟುಂಬಗಳು ಹೀಗೆ ಜೀವನ ನಡೆಸುತ್ತಿವೆ. ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಸೌಲಭ್ಯಗಳನ್ನು ನೀಡಿಲ್ಲ ಎಂದು ನೊಂದ ಕುಟುಂಬಗಳು ಕಣ್ಣೀರಿಡುತ್ತಿವೆ. ಪಟ್ಟಣದ ಅನೇಕ ಕಡೆಗಳಲ್ಲಿ ಮನೆಗಳ ಮೇಲ್ಛಾವಣಿಗಳು ನಾಶವಾಗಿವೆ. ವಿದ್ಯುತ್ ಕಂಬಗಳು, ಗಿಡಮರಗಳು ಧರೆಗುರುಳಿವೆ. ಮಳೆಯ ಅವಾಂತರದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.