ನಟಿ ಮೇಘನಾ ರಾಜ್ ಸರ್ಜಾ ಅವರ ಬದುಕಿನಲ್ಲಿ ಹಲವು ಏರಿಳಿತಗಳಾದವು. ಪತಿ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಅವರು ಸಾಕಷ್ಟು ನೋವು ಅನುಭವಿಸಬೇಕಾಯಿತು. ಈಗ ಪುತ್ರ ರಾಯನ್ ರಾಜ್ ಸರ್ಜಾನ ಆರೈಕೆಯಲ್ಲಿ ಅವರು ನಗು ಕಂಡುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೋವು ನೀಡುವಂತಹ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ರಾಯನ್ ರಾಜ್ ಸರ್ಜಾ ನಾಮಕರಣದ ದಿನವೇ ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಅವರು ಕೆಲವು ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅದಕ್ಕೂ ಮೀರಿ, ಮೇಘನಾ ಎರಡನೇ ಮದುವೆ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿಪರ್ಯಾಸ.
ಎರಡನೇ ಮದುವೆ ಬಗ್ಗೆ ಮೇಘನಾ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಹೇಳಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಕೆಲವು ಯೂಟ್ಯೂಬ್ ಚಾನೆಲ್ಗಳು ಸುಳ್ಳು ಮಾಹಿತಿ ಹರಡುತ್ತಿವೆ. ಜನರನ್ನು ಯಾಮಾರಿಸುವ ರೀತಿಯಲ್ಲಿ ಥಂಬ್ ಇಮೇಜ್ ರಚಿಸಿ, ಆ ಮೂಲಕ ಲಕ್ಷಾಂತರ ವೀವ್ಸ್ ಪಡೆಯಲು ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ನಟ ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಘನಾ ರಾಜ್ ಬಗ್ಗೆ ಈ ರೀತಿ ಸುಳ್ಳು ಹಬ್ಬಿಸುತ್ತಿರುವುದು ಸಹಜವಾಗಿಯೇ ಚಿರು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನಟ/ನಿರ್ದೇಶಕ, ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ಟ್ವಿಟರ್ನಲ್ಲಿ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬ್ ವಾಹಿನಿಯ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು ಮೇಘನಾರ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ.
‘ನಾನು ನೋಡಿದ್ರೂ ನಿರ್ಲಕ್ಷ್ಯ ಮಾಡೋಣ ಅಂತಿದ್ದೆ. ಆದರೆ ಒಂದೇ ದಿನದಲ್ಲಿ 2.7 ಲಕ್ಷ ವೀವ್ಸ್ ಆಗಿದೆ. ವೀವ್ಸ್ ಆಗಲಿ ಮತ್ತು ದುಡ್ಡಾಗಲಿ ಎಂದು ಯೂಟ್ಯೂಬ್ ಚಾನೆಲ್ ಈ ಮಟ್ಟಕ್ಕೆ ಇಳಿದಾಗ ಸ್ವಲ್ಪ ಕಾನೂನಾತ್ಮಕವಾಗಿ ನೋಡಬೇಕಾಗುತ್ತದೆ. ಮೇಘನಾ ರಾಜ್ ಅವರೇ, ನೀವು ಇಂಥ ಒಂದು ಚಾನೆಲ್ ಅನ್ನು ಕಾನೂನಾತ್ಮಕವಾಗಿ ಡಿಲಿಟ್ ಮಾಡಿಸಿದ್ರೆ ಇನ್ನಷ್ಟು ಜನರು ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್ಗಳು ಮಾಡುವ ಅವಾಂತರಗಳು ಒಂದೆರಡಲ್ಲ. ಅವರು ಹಬ್ಬಿಸುವ ಸುಳ್ಳು ಸುದ್ದಿಯಿಂದಾಗಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದ ನಡುವೆ ವೈಮನಸ್ಸು ಮೂಡುವ ಸಾಧ್ಯತೆ ಕೂಡ ದಟ್ಟವಾಗಿತ್ತು. ಅದಕ್ಕಾಗಿಯೇ ರಾಯನ್ ರಾಜ್ ಸರ್ಜಾ ನಾಮಕರಣದ ದಿನ ಪ್ರಮೀಳಾ ಜೋಷಾಯ್ ಅವರು ಮನನೊಂದು ಮಾತನಾಡಿದ್ದರು. ಇದೆಲ್ಲವೂ ಯೂಟ್ಯೂಬ್ ಚಾನೆಲ್ಗಳ ಕಿತಾಪತಿ ಎಂದು ಧ್ರುವ ಸರ್ಜಾ ಸ್ಪಷ್ಟನೆ ನೀಡಿದ್ದರು.