ಹೊಸದಿಲ್ಲಿ: ಕೊರೋನ ವೈರಸ್ ಹಾವಳಿಯ ಕಾರಣಕ್ಕೆ ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಕೋವಿಡ್-19 ಹರಡುವುದನ್ನು ತಡೆಯಲು ಹಾಗೂ ಜನವರಿಯಲ್ಲಿ ನೇರವಾಗಿ ಬಜೆಟ್ ಅಧಿವೇಶನ ನಡೆಸುವ ಉದ್ದೇಶದಿಂದ ಚಳಿಗಾಲದ ಅಧಿವೇಶನ ರದ್ದುಪಡಿಸುವ ಕುರಿತಂತೆ ಸರ್ವಪಕ್ಷಗಳು ಒಲವು ಹೊಂದಿವೆ ಎಂದು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ದಿಲ್ಲಿಯ ಹೈವೇಗಳಲ್ಲಿ ಸಾವಿರಾರು ರೈತರು ವಿವಾದಾತ್ಮಕ ರೈತ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡಸುತ್ತಿರುವ ಕಾರಣ ಕಾಯ್ದೆ ಕುರಿತು ಚರ್ಚಿಸಲು ಅಧಿವೇಶನ ನಡೆಸಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಬರೆದಿರುವ ಪತ್ರಕ್ಕೆ ಜೋಶಿ ಈ ಉತ್ತರ ನೀಡಿದ್ದಾರೆ.
ಎಲ್ಲ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ ಹಾಗೂ ಕೋವಿಡ್-19 ಕಾರಣಕ್ಕೆ ಅಧಿವೇಶನವನ್ನು ಕರೆಯದಿರಲು ಒಮ್ಮತವಿದೆ ಎಂದು ಜೋಶಿ ಹೇಳಿದ್ದಾರೆ.