ದಕ್ಷಿಣ ಕನ್ನಡ: ಭೂ ಮಾಫಿಯ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಇದೀಗ, ಅಧಿಕಾರಿಯನ್ನು ವರ್ಗಾವಣೆ ಮಾಡಿಸಲು ಯತ್ನಿಸುತ್ತಿದ್ದ ಪ್ರಭಾವಿಗಳಿಗೆ ಕೋರ್ಟ್ನ ಆದೇಶವೊಂದು ಪರೋಕ್ಷವಾಗಿ ವರದಾನದಂತೆ ಪರಿಣಮಿಸಿದೆ ಎಂದು ಹೇಳಲಾಗಿದೆ.
ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಮದನ್ ಮೋಹನ್ರನ್ನು ವರ್ಗಾವಣೆ ಮಾಡಲಾಗಿದೆ.
ಮದನ್ ಇತ್ತೀಚೆಗೆ ನಗರದ ಮುಡಿಪು ಬಳಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದರು. ಈ ದಾಳಿ ಸಾಕಷ್ಟು ಸುದ್ದಿ ಸಹ ಮಾಡಿತ್ತು. ಜೊತೆಗೆ, ದಾಳಿ ಕುರಿತು ಅಧಿಕಾರಿಗೆ ಅಕ್ಟೋಬರ್ 20 ರ ಒಳಗೆ ತನಿಖೆ ನಡೆಸಿ ವರದಿ ಕೊಡಲು ಸಹ ಆದೇಶಿಸಲಾಗಿತ್ತು.
ಆದರೆ, ಈ ಹಿಂದೆ AC ಯಾಗಿದ್ದ ರವಿಚಂದ್ರ ನಾಯಕ್ರ ವರ್ಗಾವಣೆ ಬಳಿಕ ಅವರ ಜಾಗಕ್ಕೆ ಮದನ್ ಮೋಹನ್ರನ್ನು ನೇಮಕ ಮಾಡಲಾಗಿತ್ತು. ಆಗ, ರವಿಚಂದ್ರ ನಾಯಕ್ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದರು. ಇದೀಗ, ರವಿಚಂದ್ರ ನಾಯಕ್ ಪರ ತೀರ್ಪು ಕೋರ್ಟ್ ನೀಡಿದ್ದು ಮದನ್ ಮೋಹನ್ರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ.
ಜೊತೆಗೆ, ಅವರಿಗೆ ಇನ್ನು ಸೂಕ್ತ ಸ್ಥಳವನ್ನು ಸರ್ಕಾರ ತೋರಿಸಿಲ್ಲ. ತನಿಖಾ ವರದಿ ನೀಡುವ ಮುನ್ನವೆ ಮದನ್ ವರ್ಗಾವಣೆ ಆಗಿರುವುದರಿಂದ ಕಲ್ಲು ಗಣಿಗಾರಿಕೆ ಮಾಫಿಯಾಗೆ ಪರೋಕ್ಷವಾಗಿ ನೆರವಾಗಿದೆ ಎಂದು ಮುಡಿಪು ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.