ಗದಗ: ಜಿಲ್ಲೆಯ ಕದಂಪೂರದಲ್ಲಿ ಅನ್ನದಾತರ ಜಮೀನುಗಳಿಗೆ ತೆರಳಿ ಸಿಎಂ ಡಿಕೆ ಶಿವಕುಮಾರ್ ಅವರಿಂದು ಬರ ಪರಿಸ್ಥಿತಿಯ ಕುರಿತು ಪರಿಶೀಲಿನೆ ನಡೆಸಿದ್ದಾರೆ.
ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಗದಗ ನಗರಕ್ಕೆ ಆಗಮನಿಸಿದ ಸಿಎಂ ಮುಂಡರಗಿ ತಾಲೂಕಿನ ಕದಂಪೂರ, ಗದಗ ತಾಲೂಕಿನ ಕುರ್ತಕೋಟಿ, ಹುಲಕೋಟಿಗೆ ಭೇಟಿ ನೀಡಿ, ಬರ ವೀಕ್ಷಣೆ ಮಾಡಿದರು. ಬಸವರಾಜ ರಾಯರೆಡ್ಡಿ, ಮಾಜಿ ಸಚಿವರು, ಶಾಸಕ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಮತ್ತು ಹಿರಿಯ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು.
ರೈತ ಶಂಕರಪ್ಪ ಗಾವರವಾಡ, ಸುನಿತಾ ಪೂಜಾರ್, ಕಲ್ಲಪ್ಪ ಕಾಡಪ್ಪಗೋಳ ಎಂಬುವವರ ಜಮೀನಿನಲ್ಲಿ ಬೆಳೆದ ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ ಬೆಳೆಯನ್ನು ಸಿಎಂ ಪರಿಶೀಲನೆ ನಡೆಸಿದರು. ಬಳಿಕ ನೆಲದ ಮೇಲೆ ಕುಳಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ರೈತರು, ಬರ ಪರಿಸ್ಥಿತಿಯಿಂದ ಬೆಳೆಗಳು ಹಾಳಾಗಿವೆ. ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳು ಬರದಿಂದ ತತ್ತರಿಸಿವೆ. ಹೀಗಾಗಿ ಬಾಕಿ ಇರುವ ಜಿಲ್ಲೆಯ ಆರೂ ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಿ. ಪ್ರತಿ ಎಕರೆ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು. ಗೋ ಶಾಲೆ, ಮೇವು ಬ್ಯಾಂಕ್ ಆರಂಭಿಸಬೇಕು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ಜೊತೆಗೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ರೈತರ ಮನವಿ ಸ್ವೀಕರಿಸಿದ ಸಿಎಂ, ಬರ ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಮತ್ತಷ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಪರಿಸ್ಥಿತಿಯ ಅಧ್ಯಯನದ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಬರಪೀಡಿತ ತಾಲೂಕುಗಳನ್ನು ಘೋಷಿಸುವುದಾಗಿ ಭರವಸೆ ನೀಡಿದರು. ಬಳಿಕ ಕೃಷಿ ಅಧಿಕಾರಿ ಚೇತನಾ ಪಾಟೀಲ ಅವರಿಂದ ಜಿಲ್ಲೆಯಲ್ಲಿ ಎಷ್ಟು ಬಿತ್ತನೆ ಆಗಿದೆ? ಎಷ್ಟು ಹಾನಿಯಾಗಿದೆ? ಅಂತೆಲ್ಲಾ ಮಾಹಿತಿ ಪಡೆದರು. ಬಳಿಕ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು.
Laxmi News 24×7