ಗೋಕಾಕ : ಎರಡು ಕುಟುಂಬಗಳ ನಡುವಿನ ಭೂ ವಿವಾದದ ವೈಷಮ್ಯದ ಹಿನ್ನೆಲೆಯಲ್ಲಿ ಗೋಕಾಕ ತಾಲ್ಲೂಕಿನ ಕುಂದರಗಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಆರೋಪಿಗಳೆಲ್ಲರೂ ಕುಂದರಗಿ ಗ್ರಾಮದವರಾಗಿದ್ದಾರೆ. ಮಹಮ್ಮದಹನೀಪ ದೇಸಾಯಿ(50) ಸಹೋದರರಾದ ಮೆಹಬೂಬ ದೇಸಾಯಿ(47) ಹಾಗೂ ಹಸನಸಾಬ ದೇಸಾಯಿ(57), ಪುತ್ರ ಸೋಹೆಲ್ ದೇಸಾಯಿ(21), ಪತ್ನಿ ಮಮತಾಜ ದೇಸಾಯಿ(40),ಸಹೋದರ ಮೆಹಬೂಬ ಪತ್ನಿ ಶಕೀಲಾ, ದೇಸಾಯಿ(38),ಸೋದರ ಸಂಬಂಧಿ ಬಿಯಾಮಾ ದೇಸಾಯಿ(45) ಹಾಗೂ ಅವನ ಪುತ್ರ ಪೈಯಾಜ ದೇಸಾಯಿ(19) ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ.
ಇವರು 2017ರ ಆಗಸ್ಟ್ 15 ರಂದು ರಾತ್ರಿ 9:30 ಸುಮಾರಿಗೆ ಕುಂದರಗಿ ಗ್ರಾಮದ ಜಹಾಂಗೀರ ಶಮಶೇರಖಾನ ದೇಸಾಯಿ(52) ಎನ್ನುವವರನ್ನು ಕುಡಗೋಲು,ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು. ಈಗ ಕೊಲೆ ಮಾಡಿದ್ದು ಸಾಬೀತಾಗಿದೆ. ಮೃತರ ಪುತ್ರ ಶಮಶೇರಖಾನ ಅಂಕಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತು. ಗೋಕಾಕದ ಅಂದಿನ ಸಿಪಿಐ ಮೋಹನ ತಾನಪ್ಪಗೋಳ ತನಿಖೆ ನಡೆಸಿ,
ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಗಣಪತಿ ಮಹುರಕರ ವಾದಿಸಿದ್ದರು.