ಬೆಳಗಾವಿ: ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಕಲಹ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಇಂದು ಡಿಸಿಪಿ ವಿಕ್ರಂ ಆಮ್ಟೆ ಸುದ್ದಿಗೋಷ್ಠಿ ನಡೆಸಿದರು. ನಮ್ಮ ಪೊಲೀಸರು ಕೆ.ಕಲ್ಯಾಣ್ ಅವರ ಪತ್ನಿ ಹಾಗೂ ಅತ್ತೆ, ಮಾವ ಅವರನ್ನ ರಕ್ಷಿಸಿದ್ದಾರೆ. ಜೊತೆಗೆ, ಆರೋಪಿ ಶಿವಾನಂದ ವಾಲಿನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಬಂಧಿತನ ಬಳಿಯಿದ್ದ 9 ಮ್ಯಾಕ್ಸಿ ಕ್ಯಾಬ್, 350 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದೇವೆ ಎಂದು ಡಿಸಿಪಿ ವಿಕ್ರಂ ಆಮ್ಟೆ ಹೇಳಿದ್ದಾರೆ.
ದಂಪತಿ ಮಧ್ಯೆ ಮನಸ್ತಾಪ ಉಂಟುಮಾಡಿ, ಆಸ್ತಿ ವರ್ಗಾವಣೆ!
ಹುಬ್ಬಳ್ಳಿ ಧಾರವಾಡ, ಬೆಂಗಳೂರು ಹಾಗೂ ಬೆಳಗಾವಿ ನಗರಗಳಲ್ಲಿ ಇದ್ದ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಶಿವಾನಂದ ವಾಲಿ ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಎರಡು ಆಸ್ತಿಗಳನ್ನು ತನ್ನ ಹೆಸರಿಗೆ ಖರೀದಿಸಿ, ನಾಲ್ಕು ಆಸ್ತಿಗಳನ್ನು ಜಿಪಿಎ ಸಹ ಮಾಡಿಕೊಂಡಿದ್ದಾನೆ.
ಕೆ.ಕಲ್ಯಾಣ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಷಡ್ಯಂತ್ರ ಮಾಡಿ ಈ ಕೃತ್ಯವೆಸಗಿದ್ದಾರೆ. ಕೆ.ಕಲ್ಯಾಣ್ ದಂಪತಿ ಮಧ್ಯೆ ಮನಸ್ತಾಪ ಉಂಟುಮಾಡಿದ್ದಾರೆ. ಬಳಿಕ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ ಎಂದು ಡಿಸಿಪಿ ಆಮ್ಟೆ ಹೇಳಿದ್ದಾರೆ.
ಪ್ರಥಮ ಬಾರಿಗೆ ವಾಮಾಚಾರ ಪ್ರತಿಬಂಧ ಹಾಗೂ ನಿರ್ಮೂಲನೆ ಕೇಸ್
ಶಿವಾನಂದ ವಾಲಿ ತನ್ನ ಮೈ ಮೇಲೆ ದೇವರು ಬಂದ ಹಾಗೆ ನಟಿಸುತ್ತಿದ್ದ. ಬಳಿಕ ನಿಮ್ಮ ಹೆಸರಲ್ಲಿ ಆಸ್ತಿ ಇದ್ರೆ ನಿಮ್ಮ ಜೀವಕ್ಕೆ ತೊಂದರೆ ಇದೆ ಎಂದು ಪುಸಲಾಯಿಸಿ ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಂಡಿದ್ದ.
ಹಾಗಾಗಿ, ಈತನ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಹಾಗೂ ನಿರ್ಮೂಲನೆ 2017ರಡಿ ಕೇಸ್ ದಾಖಲಿಸಿಕೊಳ್ಳಲು ಮುಂದಾಗಿದ್ದೇವೆ. ನಗರದಲ್ಲಿ ಪ್ರಥಮ ಬಾರಿಗೆ ಈ ಕೇಸ್ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಡಿಸಿಪಿ ಆಮ್ಟೆ ಹೇಳಿದ್ದಾರೆ.
ಗಂಗಾ ಕುಲಕರ್ಣಿ ಇನ್ನೂ ನಾಪತ್ತೆ
ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗಂಗಾ ಕುಲಕರ್ಣಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದೇವೆ ಎಂದು ಡಿಸಿಪಿ ವಿಕ್ರಂ ಆಮ್ಟೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಚಿತ್ರಸಾಹಿತಿ ಕೆ.ಕಲ್ಯಾಣ್ ಸೆ. 30ರಂದು ನೀಡಿದ್ದ ದೂರಿನ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.