ಬೆಳಗಾವಿ : ತಾಲ್ಲೂಕಿನ ಗೌಂಡವಾಡ ಗ್ರಾಮದ ಕಾಳಬೈರವನಾಥ್ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಐದು ಜನರ ಗುಂಪು ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಗೌಂಡವಾಡ ಗ್ರಾಮದ ಸತೀಶ್ ಪಾಟೀಲ(34) ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ರಾತ್ರಿ 9.30 ರ ಸುಮಾರಿಗೆ ಬೆಳಗಾವಿ ನಗರದ ಮರಾಠ ಮಂಡಳ ಕಾಲೇಜ್ ಸಮೀಪವಿರುವ ತಮ್ಮ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ತೆರಳುವ ವೇಳೆ, ಐದು ಜನರ ಗುಂಪು ಮಾರಕಾಸ್ತ್ರ, ಕಲ್ಲುಗಳಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.
ಸತೀಶ್ ಗ್ರಾಮ ಪಂಚಾಯಿತಿಯಿಂದ ದೇವಸ್ಥಾನಕ್ಕೆ 1 ಎಕರೆ ಜಾಗವನ್ನು ಪಡೆದುಕೊಂಡಿದ್ದನು. ಈ ಜಾಗವನ್ನು ಗೌಂಡವಾಡ ಗ್ರಾಮದ ಮಲ್ಲಪ್ಪ ಅಪ್ಪಣ್ಣ ಕುಟ್ರೆ ಮತ್ತು ಭರತ ಪಾಟೀಲ ಸೇರು ಐವರು ಜಾಗವನ್ನು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡಿದ್ದರು.
ಇದರಿಂದ ಸಾಮಾಜಿಕ ಕಾರ್ಯಕರ್ತ ಸತೀಶ್, ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದನು. ಐವರು ಸುಳ್ಳು ದಾಖಲೆ ಸೃಷ್ಟಿಸಿರುವುದು ಸಾಬೀತಾದ ಹಿನ್ನೆಲೆ ಮರಳಿ 1 ಎಕರೆ ಜಾಗವನ್ನು ದೇವಸ್ಥಾನಕ್ಕೆ ನೀಡಲಾಗಿತ್ತು. ಇದರಿಂದ ರೋಚ್ಚಿಗೆದ್ದ ಐವರು ಪ್ಲ್ಯಾನ್ ಮಾಡಿಕೊಂಡು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.