ಬೆಂಗಳೂರು: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ಪ್ರಾಯೋಜಿತ ಎಂದು ಕರೆದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯ ಬಗ್ಗೆ ಪ್ರತಿಪಕ್ಷಗಳು ಬುಧವಾರ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.
ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಮಾತನಾಡಿ, ‘ರೈತರ ಚಳವಳಿ ಸ್ಪಾನ್ಸರ್ಡ್ ಎಂಬ ಹೇಳಿಕೆಯನ್ನು ಮುಖ್ಯಮಂತ್ರಿ ಸಮರ್ಥನೆ ಮಾಡಿಕೊಂಡು, ಅದಕ್ಕೆ ಬದ್ಧರಾಗಿದ್ದಾರೆ, ಸಂತೋಷ. ಈ ಬಗ್ಗೆ ರೈತರು ಮತ್ತು ಹೊರಗಿನ ಜನರು ತೀರ್ಮಾನಿಸುತ್ತಾರೆ ಎಂದು ರಮೇಶ್ ಕುಮಾರ್ ಹೇಳಿದರು.
ರಮೇಶ್ ಕುಮಾರ್ ಮಾತನಾಡುತ್ತಿದ್ದಾಗ ಮಧ್ಯಪ್ರವೇಶ ಮಾಡಿದ ಬೊಮ್ಮಾಯಿ, ‘ನನಗೆ ರಮೇಶ್ ಕುಮಾರ್ ನೀಡುತ್ತಿರುವ ಸಂದೇಶ ಏನು ಎಂಬುದು ಗೊತ್ತಿದೆ. ಸತ್ಯ ಹೇಳುವುದಕ್ಕೆ ನಾನು ಹಿಂಜರಿಯುವುದಿಲ್ಲ’ ಎಂದು ಟಾಂಗ್ ಕೊಟ್ಟರು. ಮುಖ್ಯಮಂತ್ರಿಯ ಹೇಳಿಕೆಯನ್ನು ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಈ ವೇಳೆ ಗದ್ದಲ ಮನೆಮಾಡಿತು.
‘ರೈತರ ಚಳವಳಿ ಪ್ರಾಯೋಜಿತ (ಸ್ಪಾನ್ಸರ್ಡ್) ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಬಗ್ಗೆ ಹೆಚ್ಚಿನ ಮಾಹಿತಿ ಇದೆಯೇ? ರೈತರ ಚಳವಳಿಗೆ ವಿದೇಶಿ ಪ್ರಾಯೋಜಕತ್ವ (ಸ್ಪಾನ್ಸರ್ಶಿಪ್) ಸಿಕ್ಕಿದೆಯೇ? ಸಿಕ್ಕಿದ್ದರೆ ಅದು ಯಾವುದು ಎಂದು ಹೇಳಿ’ ಎಂದು ರಮೇಶ್ ಕುಮಾರ್ ಸವಾಲು ಹಾಕಿದರು.
‘ಆಗ ಅದು ಕಾಂಗ್ರೆಸ್ ಸ್ಪಾನ್ಸರ್ಶಿಪ್’ ಎಂದು ಬಿಜೆಪಿ ಶಾಸಕರು ದೂರಿದರು. ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಮೇಶ್ ಕುಮಾರ್ ಬಹಳ ಅನುಭವಿ. ಎರಡು ಕಡೆಗೂ ಮಾತಾಡುವ ಶಕ್ತಿ ಇದೆ. ಈ ಹಿಂದೆಯೂ ಚಳವಳಿ ಆಗಿತ್ತು. ಆಗಲೂ ವಿದೇಶಿ ಕೈಗಳ ಶಕ್ತಿ ಎಂದು ಇಂದಿರಾಗಾಂಧಿ ಕಾಲದಲ್ಲಿ ಹೇಳುತ್ತಿದ್ದರು. ಈಗ ಆ ಮಾತನ್ನೂ ನಾನು ಹೇಳಲ್ಲ, ಆದರೆ ಫಾರಿನ್ ಏಜೆಂಟರು, ಎಂಎಸ್ಪಿ ಏಜೆಂಟರು ಸ್ಪಾನ್ಸರ್ ಮಾಡ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ದೂರಿದರು.