ನಟ, ರಾಜಕಾರಣಿ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಈ ನಡುವೆ ಸಹೋದರನ ಹಾದಿಯನ್ನೇ ಅಕ್ಕ ಗೀತಾ ಶಿವರಾಜ್ ಕುಮಾರ್ ಸಹ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ನಟ ಶಿವರಾಜ್ ಕುಮಾರ್ ಅವರ ಪತ್ನಿ, ಜೆಡಿಎಸ್ ಸದಸ್ಯೆ ಗೀತಾ ಶಿವರಾಜ್ ಕುಮಾರ್ ಅವರು ಸಹ ಕಾಂಗ್ರೆಸ್ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸದಾಶಿವನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, ‘ಅಕ್ಕ ಈಗಾಗಲೇ ಕಾಂಗ್ರೆಸ್ಗೆ ಬಂದಾಗಿದೆ ಎಂದೇ ತಿಳಿದುಕೊಳ್ಳಿ’ ಎಂದು ಹೇಳಿದರು.
ಪಕ್ಕದಲ್ಲೇ ಇದ್ದ ಡಿ.ಕೆ.ಶಿವಕುಮಾರ್ ಮಾತನಾಡಿ, ‘ನಾವು ಅವರೊಂದಿಗೆ ಅಧಿಕೃತವಾಗಿ ಮಾತನಾಡುತ್ತೇವೆ. ಅವರೊಬ್ಬ ಗೌರವಾನ್ವಿತ ಮಹಿಳೆ. ಪಕ್ಷ ಕಷ್ಟದಲ್ಲಿದ್ದಾಗ ಹೋರಾಟ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಕುಟುಂಬಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ಇದೆ. ನಾವು ಅವರನ್ನು ಗೌರವದಿಂದ ಕಾಣಬೇಕಾಗಿದೆ. ನಾವು ಸಹ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ದೆಹಲಿ ಮಟ್ಟದಲ್ಲಿ ಅವರ ಬಗ್ಗೆ ಮಾತನಾಡಬೇಕಿದೆ. ಅವರಿಗೆ ಏನು ಗೌರವವನ್ನು ನಾವು ಕೊಡಬೇಕೋ ಅದನ್ನು ಕೊಡಲೇ ಬೇಕಾಗುತ್ತದೆ’ ಎಂದಿದ್ದಾರೆ.