ತುಮಕೂರು: ಶಿರಾ ಉಪಚುನಾವಣಾ ಕಣದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಮೂರು ಪಕ್ಷಗಳಿಂದ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಬರುತ್ತಿದೆ. ಸುಮಾರು 520 ಎಕರೆ ಪ್ರದೇಶದಲ್ಲಿರುವ ಮದಲೂರು ಕೆರೆಗೆ ಹೇಮಾವತಿ ನದಿಯಿಂದ ಈ ಹಿಂದೆ ನೀರು ಹರಿಸಲಾಗಿತ್ತು. ಆದರೆ, ಹೇಮಾವತಿ ನದಿ ನೀರು ಕಾವೇರಿ ಕೊಳ್ಳದ ವ್ಯಾಪ್ತಿ ಎಂಬ ಕಾರಣಕ್ಕೆ ಅದನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.
ಇದೀಗ, ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲು ಯೋಜನೆ ರೂಪಿಸಲಾಗ್ತಿದೆ.
ಈ ಹೆಗ್ಗಳಿಕೆಯನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿವೆ. ಶಿರಾದ ಜನರು ಮದಲೂರು ನೀರನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಮದಲೂರು ಕೆರೆಗೆ ನೀರು ಹರಿಸುವ ಕ್ರೆಡಿಟ್ ಪಡೆದುಕೊಳ್ಳಲು ಮೂರು ಪಕ್ಷಗಳು ನಾ ಮುಂದು ತಾ ಮುಂದು ಎಂದು ಸೆಣಸಾಡುತ್ತಿವೆ.
ಮದಲೂರು ಕೆರೆಗೆ ಹೇಮಾವತಿ ನೀರು ಹರಿಸ್ತೇವೆಂದು CM ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ TB ಜಯಚಂದ್ರ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆಯನ್ನು ಅಂದು ಸ್ಥಗಿತ ಮಾಡಿದ್ದೇ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಯೋಜನೆ ಸ್ಥಗಿತ ಮಾಡಿದ್ದೇ ಸಿಎಂ B.S.ಯಡಿಯೂರಪ್ಪ’
ಸಿಎಂ ಆದವರಿಗೆ ಮದಲೂರು ಕೆರೆ ಯೋಜನೆ ಬಗ್ಗೆ ಅರಿವಿದೆಯೆಂದು ಭಾವಿಸ್ತೇನೆ. ಕೇವಲ ಮತಗಳಿಕೆಗಾಗಿ ಮಾತ್ರ ಸಿಎಂ ಹೇಳಿಕೆ ನೀಡಿದ್ದಾರೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗಲೇ ಈ ಬಗ್ಗೆ ಹೇಳಿದ್ದೆ. ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದೆ. 2008ರಲ್ಲಿ ಯೋಜನೆ ಜಾರಿಗೆ ಪ್ರಕ್ರಿಯೆ ಆರಂಭವಾಯಿತು. ಆದ್ರೆ ಬಿಜೆಪಿ ಮುಖಂಡರು ಹೇಮಾವತಿಯಿಂದ ನೀರು ಬಿಡಬಾರದೆಂದು ಹೇಳಿದ್ರು ಎಂದು ಜಯಚಂದ್ರ ಆರೋಪಿಸಿದ್ದಾರೆ.
ಆಗ, ಯೋಜನೆ ಸ್ಥಗಿತ ಮಾಡಿದ್ದೇ ಸಿಎಂ B.S.ಯಡಿಯೂರಪ್ಪ. ಇದಾದ ಬಳಿಕ ಯೋಜನೆ ಮುಂದುವರಿಸಲು ಸಾಧ್ಯವೇ ಆಗಲಿಲ್ಲ. ನಾನೇ ಕೇಂದ್ರ ಸರ್ಕಾರದ ಬಳಿ ಹೋಗಿ ಕುಡಿಯುವ ನೀರಿನ ಯೋಜನೆಯೆಂದು ಅನುಮತಿ ಪಡೆದಿದ್ದೆ. 60 ಕೋಟಿ ಹಣ ಸಹ ಮಂಜೂರು ಮಾಡಿಸಿಕೊಂಡು ಬಂದೆ. ಆದರೆ, BJPಯವ್ರು ಕೆಲಸ ಮಾಡಲು ಬಿಡಲಿಲ್ಲ, ಹಣ ಸಹ ನೀಡಲಿಲ್ಲ. ಕಾಮಗಾರಿ ಮುಂದುವರಿಸಬೇಡಿಯೆಂದು ಸಿಎಂರಿಂದ ತಡೆ ಒಡ್ಡಲಾಯಿತು.
ಸಿಎಂರಿಂದ ತಡೆ ತಂದಿದ್ದೇ ಸ್ಥಳೀಯ ಬಿಜೆಪಿ ಮುಖಂಡರು. ಸಿಎಂ ಆಗಿ ಬಂದವರೆಲ್ಲಾ ಇದಕ್ಕೆ ಅಡಚಣೆ ಮಾಡಿದ್ರು ಎಂದು ಜಯಚಂದ್ರ ಹೇಳಿದರು. ಕೃಷ್ಣಾ ನದಿಯ ನೀರು ವಿಚಾರದಲ್ಲಿ ನಾನೇ ವಾದ ಮಂಡಿಸಿದ್ದೆ. ಕೋರ್ಟ್ಗೆ ಕೋಟ್ ಹಾಕಿಕೊಂಡು ಹೋಗಿ ವಾದ ಮಾಡಿದ್ದೆ ಎಂದು ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಶಿರಾ ಉಪಸಮರ : ಮದಲೂರು ಕೆರೆ ಮೇಲೆ ಕೈ – ಕಮಲ – ದಳ ತ್ರಿಕೋನ ಪ್ರೇಮ ! ಹೇಗೆ ?