ಬೆಂಗಳೂರು: IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಶಂಕೆಯಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 20 ವರ್ಷದ ಮಂಜುನಾಥ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕಳೆದ ಒಂದು ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ವಿದ್ಯಾಭ್ಯಾಸಕ್ಕೆಂದು ಅಜ್ಜಿ ಮನೆಗೆ ಬಂದಿದ್ದ ಮಂಜುನಾಥ್ ಕಳೆದ ವಾರ ಇದ್ದಕ್ಕಿದ್ದಂತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಆಗ, ಕಾರಣ ತಿಳಿದಯದೇ ಇದ್ದ ಕುಟುಂಬಸ್ಥರಿಗೆ ಶಾಕ್ ಆಗಿತ್ತು. ಆದರೆ ಈಗ, ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಲು ಆತನಿಗಿದ್ದ ಕ್ರಿಕೆಟ್ ಬೆಟ್ಟಿಂಗ್ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ, ಆತನ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಈ ಬಾರಿ IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಮಂಜುನಾಥ್ ಹಣ ಸೋತಿದ್ದನಂತೆ. ಇದಕ್ಕಾಗಿ, ಮಂಜುನಾಥ್ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ್ದನಂತೆ. ಹೀಗಾಗಿ, ಸಾಲದ ಹಣ ವಾಪಸ್ ಕೊಡುವಂತೆ ಆತನ ಸ್ನೇಹಿತರು ಪೀಡಿಸುತ್ತಿದ್ದರಂತೆ. ಜೊತೆಗೆ, ಹಣ ವಾಪಸ್ ಕೊಡದಿದ್ದರೆ ಮನೆಯವರಿಗೆ ವಿಷಯ ತಿಳಿಸುವ ಬಗ್ಗೆ ಎಚ್ಚರಿಕೆ ಸಹ ನೀಡಿದ್ದರಂತೆ. ಇದರಿಂದ ಹೆದರಿದ ಮಂಜುನಾಥ್ ಕಳೆದ ಶುಕ್ರವಾರ ಸೂಲಿಕೆರೆ ಗ್ರಾಮದಲ್ಲಿ ಕೀಟನಾಶಕ ಕುಡಿದಿದ್ದಾನೆ ಎಂದು ಹೇಳಲಾಗಿದೆ. ಮಂಜುನಾಥ್ ವಿಷ ಕುಡಿದು ತನ್ನ ಸ್ನೇಹಿತರಿಗೆ ಕರೆ ಮಾಡಿದ್ದನಂತೆ. ಬಳಿಕ, ಆತನ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಜುನಾಥ್ ಇಂದು ಸಾವನ್ನಪ್ಪಿದ್ದಾನೆ.
ಆದರೆ, ಮಂಜುನಾಥ್ ಕುಟುಂಬಸ್ಥರು ಈ ವಾದವನ್ನು ಒಪ್ಪಿಲ್ಲ. ಮಂಜುನಾಥ್ ಆತ್ಮಹತ್ಯೆಗೆ ಶರಣಾಗಲು ನಿಖರ ಕಾರಣದ ಬಗ್ಗೆ ಗೊಂದಲವಿರುವ ಹಿನ್ನೆಲೆಯಲ್ಲಿ ಮೃತನ ಅಣ್ಣ ಪೊಲೀಸರ ಬಳಿ ದೂರು ದಾಖಲಿಸಿದ್ದಾನೆ. ಮಂಜುನಾಥ್ ಆತ್ಮಹತ್ಯೆಗೆ ಬೇರೆ ಕಾರಣದ ಶಂಕೆಯಿರುವ ಹಿನ್ನೆಲೆಯಲ್ಲಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.