ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರ ನೇಮಕಾತಿ ಆದೇಶ ಹೊರಡಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.
ಉಪನ್ಯಾಸಕರಾಗಿ ಆಯ್ಕೆಯಾಗಿರುವ ನೂರಾರು ಅಭ್ಯರ್ಥಿಗಳು ನೇಮಕಾತಿ ಆದೇಶ ಹೊರಡಿಸುವಂತೆ ಸರ್ಕಾರವನ್ನು ಆಗ್ರಹಿಸಿ ಶನಿವಾರ ಆರನೇ ದಿನವೂ ಪಿಯು ಮಂಡಳಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಿದರು. ಕೊರೊನಾ ವೈರಸ್ ಸಂದರ್ಭದಲ್ಲಿ ಮಳೆ, ಗಾಳಿ ನಡುವೆಯೂ ಉಪನ್ಯಾಸಕರು ಹೆಚ್ಚು ಕಾಲ ಧರಣಿ ಮುಂದುವರೆಸಿ ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಹಿನ್ನೆಲೆಯಲ್ಲಿ ಕೆಲ ಷರತ್ತು ವಿಧಿಸಿ ನೇಮಕಾತಿ ಆದೇಶ ಹೊರಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಬಳಿಕವೇ ಅವರ ಕರ್ತವ್ಯ ಹಾಜರಾತಿ ಪರಿಗಣಿಸುವುದಾಗಿ ಷರತ್ತು ವಿಧಿಸಿ ಈಗಾಗಲೇ ನೇಮಕಾತಿ ಆದೇಶ ಹೊರಡಿಸಲು ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.